ತಾರೆ ನಮಿತಾಗೆ ಅಪಾಯ, ಆಂಬುಲೆನ್ಸ್ ಗಳ ಕಿತ್ತಾಟ!
ಬೆಳ್ಳಿಪರದೆಯ ತೂಕದ ಬೆಡಗಿ ನಮಿತಾ ಅವರಿಗೆ ತಮಿಳುನಾಡಿನಲ್ಲಿ ಅಭಿಮಾನಿಗಳ ಅಭಿಮಾನ ಯಾವ ಮಟ್ಟದಲ್ಲಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆಕೆಗಾಗಿ ಜೀವವನ್ನೂ ಬೇಕಾದರೂ ಕೊಡುವಷ್ಟರ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ನಮಿತಾರನ್ನು ಆರಾಧಿಸುವ ಅಭಿಮಾನಿಗಳಿಗೆ ನಮ್ಮ ರಾಜ್ಯದಲ್ಲೂ ಬರವಿಲ್ಲ ಬಿಡಿ.
ಇತ್ತೀಚೆಗೆ ತಮಿಳುನಾಡಿನ ನಾಮಕ್ಕಲ್ ಸಮೀಪ ಕಾರ್ಯಕ್ರಮವೊಂದರಲ್ಲಿ ನಮಿತಾ ಭಾಗವಹಿಸಲು ಬಂದಿದ್ದರು. ಆದರೆ ಅದೇ ಅಭಿಮಾನಿಗಳಿಂದ ಕೊಂಚ ಮುಜುಗರದ ಪ್ರಸಂಗವೂ ನಮಿತಾರಿಗೆ ಎದುರಾಯಿತು. ಅಭಿಮಾನಿಗಳ ಅತ್ಯುತ್ಸಾಹದ ಕಾರಣ ನಮಿತಾ ಪ್ರಮಾದದಲ್ಲೂ ಸಿಕ್ಕಿ ಬೀಳುವಂತಾಯಿತು. [ನಮಿತಾ ಮಾದಕ ಚಿತ್ರಗಳು, ಪ್ರಾಪ್ತ ವಯಸ್ಕರಿಗೆ ಮಾತ್ರ]
ನಾಮಕ್ಕಲ್ ಸಮೀಪದ ರೆಡ್ಡಿಪಟ್ಟಿ ಗ್ರಾಮದಲ್ಲಿ ಭಗವತಿ ಆಲಯದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆಲಯದಲ್ಲಿ ನಾಮಕ್ಕಲ್ ಯುವ ನಾಟಕ ಸಂಘದ ನೇತೃತ್ವದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಿದ್ದರು. ಕಾರ್ಯಕ್ರಮದ ನಿರ್ವಾಹಕರ ಆಹ್ವಾನದ ಮೇರೆಗೆ ಚೆನ್ನೈನಿಂದ ನಮಿತಾ, ನಿರ್ದೇಶಕ ಕೆ ಭಾಗ್ಯರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಈ ಕಾರ್ಯಕ್ರಮಕ್ಕೆ ನಮಿತಾ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಅಕ್ಕಪಕ್ಕದ ಊರುಗಳಿಂದ ಸಾಕಷ್ಟು ಅಭಿಮಾನಿಗಳು ಹರಿದುಬಂದಿದ್ದರು. ನಮಿತಾ ವೇದಿಕೆಗೆ ಆಗಮಿಸುತ್ತಿದ್ದಂತೆ ಅದೆಲ್ಲೆತ್ತೋ ಏನೋ ಅಭಿಮಾನಿಗಳ ಉತ್ಸಾಹ ಒಮ್ಮೆಲೆ ಕಟ್ಟೆಯೊಡೆಯಿತು. ವೇದಿಕೆ ಮೇಲೆ ಸುನಾಮಿಯಂತೆ ಎರಗಿದ ಅಭಿಮಾನಿಗಳ ಅತ್ಯುತ್ಸಾಹಕ್ಕೆ ವೇದಿಕೆಯೇ ಕುಸಿದುಬಿತ್ತು.
ಆದರೆ ನಮಿತಾ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಅಷ್ಟರಲ್ಲಾಗಲೆ ನಮಿತಾ ಅವರು ಸ್ಟೇಜ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತು. ಏನಾಗುತ್ತಿದೆ ಎಂದುಕೊಳ್ಳುವಷ್ಟರಲ್ಲೇ ಆಂಬುಲೆನ್ಸ್ ಸೈರನ್ ಮೊಳಗಿಸಿಕೊಂಡು ಆಗಮಿಸಿದವು.
ನಮಿತಾ ಅವರಿಗೆ ಇನ್ನೇನೋ ಆಗಿದೆ ಎಂದುಕೊಂಡು ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್ ಗಳು ಬಂದವು. ನಮಿತಾರನ್ನು ತಾವು ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ಒಂದು ಗುಂಪು, ಇಲ್ಲಾ ಇಲ್ಲಾ ತಾವು ಕರೆದೊಯ್ಯುತ್ತೇವೆ ಎಂದು ಇನ್ನೊಂದು ಗುಂಪಿನ ನಡುವೆ ಸಣ್ಣ ಯುದ್ಧವೇ ಸಂಭವಿಸಿದೆ. ಕಡೆಗೆ ಸ್ವತಃ ನಮಿತಾ ಅವರೇ ಬಂದು ತಮಗೇನು ಆಗಿಲ್ಲ ಎಂದು ತಿಳಿಹೇಳುವ ಹೊತ್ತಿಗೆ ಅವರು ಉಸ್ಸಪ್ಪಾ ಎಂದಿದ್ದರು.


Click it and Unblock the Notifications












