ಯು.ಆರ್.ಅನಂತಮೂರ್ತಿ ಯವರ ಘಟಶ್ರಾದ್ಧ ಕಾದಂಬರಿ ಆಧಾರಿತ ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದರು. ಸದಾನಂದ ಸುವರ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಬಿ.ವಿ.ಕಾರಂತ್ ಸಂಗೀತ ನೀಡಿದ್ದರು. 1977 ನೇ ಸಾಲಿನಲ್ಲಿ ನೀಡುವ ರಾಷ್ಟ್ರೀಯ ಅತ್ಯುತ್ತಮ ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು.
ಉಡುಪರು ಒಂದು ಹಳ್ಳಿಯಲ್ಲಿ ವೇದ ಪಾಠಶಾಲೆಯನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರಿಗೆ ಬಾಲ್ಯದಲ್ಲೇ ವಿಧವೆಯಾದ ಯಮುನಾ ಎಂಬ ಪುತ್ರಿ. ಒಬ್ಬ ಶಾಲಾ ಶಿಕ್ಷಕನ ಪ್ರೇಮದಲ್ಲಿ ಬೀಳುವ ಯಮುನಾ ಬಸುರಿಯಾಗುತ್ತಾಳೆ. ಇದರಿಂದ ತನ್ನ ಸಮುದಾಯ ಮತ್ತು ಹಳ್ಳಿಯಲ್ಲಿ ಅವಮಾನಕ್ಕೀಡಾಗುವ ಉಡುಪರು ತಮ್ಮ ಮಗಳನ್ನು ಹೊರಹಾಕಿ, ತಮ್ಮ ಪಾಲಿಗೆ ಅವಳು ಸತ್ತಳೆಂದು ಘಟಶ್ರಾದ್ಧ ( ವ್ಯಕ್ತಿ ಜೀವಂತವಿರುವಾಗಲೇ ಮಾಡುವ ಶ್ರಾದ್ಧ) ಮಾಡುತ್ತಾರೆ.