ಯಜಮಾನ ಚಿತ್ರದ ನಂತರ ಬಿ ಸುರೇಶ್ ಮತ್ತು ಶೈಲಜಾ ನಾಗ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಣ ಮಾಡಿರುವ ಚಿತ್ರ ಕ್ರಾಂತಿ. ದರ್ಶನ್ ಅವರ ಈ 55ನೇ ಚಿತ್ರವನ್ನು ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. 'ಬುಲ್ ಬುಲ್' ಹಾಗೂ ಅಂಬರೀಶ ಸಿನಿಮಾಗಳ ನಂತರ ಕ್ರಾಂತಿ ಮೂಲಕ ರಚಿತಾ ರಾಮ್ ಹಾಗೂ ದರ್ಶನ ಜೋಡಿಯಾಗಿ ತೆರೆಮೇಲೆ ಬರುತ್ತಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು, ರವಿಶಂಕರ್ ಸೇರಿದಂತೆ ಘಟಾನುಘಟಿ ನಟರು ಅಭಿನಯಿಸಿದ್ದಾರೆ. ಬಹುತೇಕ ಸೆಟ್ ಗಳಲ್ಲೇ ಕ್ರಾಂತಿ ಸಿನಿಮಾ ಚಿತ್ರೀಕರಣ ನಡೆದಿದೆ. ಪೊಲ್ಯಾಂಡ್ನಲ್ಲೂ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
2009ರಲ್ಲಿ ದರ್ಶನ್ ನಟನೆಯ 'ಯಜಮಾನ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ. ಅದೇ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಈ ಸಿನಿಮಾ ಕೂಡ ನಿರ್ಮಾಣವಾಗಿದೆ. ದರ್ಶನ್-ಹರಿಕೃಷ್ಣ ಕಾಂಬಿನೇಷನ್ ಆಲ್ಬಮ್ ಗಳೆಲ್ಲಾ ಹಿಟ್ ಆಗಿವೆ. ಈ ಬಾರಿ ಕೂಡ ನಿರೀಕ್ಷೆ ಹೆಚ್ಚಿದೆ.
ಮುಹೂರ್ತ: ಈ ಚಿತ್ರದ ಮುಹೂರ್ತ 2021 ಆಕ್ಟೋಬರ್ 15ರಂದು ವಿಜಯದಶಮಿಯಂದು ನೇರವೇರಿತು. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಮಲತಾರ ಸಮ್ಮುಖದಲ್ಲಿ ಚಿತ್ರದ ಮುಹೂರ್ತ ನೇರವೇರಿತ್ತು.
ಬಿಡುಗಡೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಜನವರಿ 26ರಂದು ಬಿಡುಗಡೆಯಾಗಿದೆ.
ಕಾಂಟ್ರವರ್ಸಿ: ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾ ಸಾಂಗ್ ರಿಲೀಸ್ ವೇಳೆ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದಿದ್ದ. ಚಿತ್ರರಂಗದ ತಾರೆಯರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಚಿತ್ರರಂಗದ ದಿಗ್ಗಜ ನಟರಾದ ಸುದೀಪ್, ಶಿವರಾಜ್ಕುಮಾರ್, ಜಗ್ಗೇಶ್, ಸುದೀಪ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದರು.
ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಕುರಿತು ಪೋಸ್ಟ್ ನಟ ಕಿಚ್ಚ ಸುದೀಪ್ ಮೂರು ಪುಟಗಳ ಪೋಸ್ಟ್ ಹಂಚಿಕೊಂಡಿದ್ದರು. ಈ ಮೂಲಕ ಗೆಳೆಯನ ಬೆನ್ನಿಗೆ ನಿಂತಿದ್ದರು. ದರ್ಶನ್ ದೂರವಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಬೆಂಬಲಕ್ಕೆ ನಿಂತಿದ್ದರು. ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ ಎಂದು ಕಿಚ್ಚ ಬರೆದಿದ್ದರು.
ಕಥೆ: ತಾನು ಕಲಿತ ಶಾಲೆಯ ಶತಮಾನೋತ್ಸವಕ್ಕೆ ಬರುವ ನಾಯಕ ಕ್ರಾಂತಿ ರಾಯಣ್ಣ, ತನ್ನ ಶಾಲೆಯ ಮೇಲೆ ಕಣ್ಣು ಹಾಕಿರುವ ಒಬ್ಬ ಖಾಸಗಿ ಶಾಲಾ ಸಮೂಹ ಸಂಸ್ಥೆಯೊಂದರ ಮಾಲೀಕನ ವಿರುದ್ಧ ಭುಜಬಲ ಬಳಸಿ ಹೋರಾಡುತ್ತಾನೆ. ಆ ಬಳಿಕ ಅವನ ಇಡೀ ಸಾಮ್ರಾಜ್ಯವನ್ನು ಮಣ್ಣು ಮುಕ್ಕಿಸಲು ಹಣ ಬಲ ಬಳಸುತ್ತಾನೆ, ಸರ್ಕಾರವನ್ನು ಸರ್ಕಾರಿ ಶಾಲೆಗಳ ಪರವಾಗಿ ಚಿಂತಿಸುವಂತೆ ಮಾಡಲು ಬುದ್ಧಿ, ವಾಕ್ ಬಲದ ಪ್ರಯೋಗ ಮಾಡಿ ಕಾರ್ಯದಲ್ಲಿ ಸಫಲನಾಗುತ್ತಾನೆ. ಹಣಬಲ, ಬಾಹುಬಲವುಳ್ಳ ಎನ್ಆರ್ಐ ವ್ಯಕ್ತಿಯೊಬ್ಬ ಖಾಸಗಿ ಶಾಲೆಗಳ ಮೇಲೆ ಸಮರ ಸಾರುವ, ಹಾಗೂ ಸರ್ಕಾರವನ್ನು ಸರ್ಕಾರಿ ಶಾಲೆಗಳ ಪರವಾಗುವಂತೆ ಮಾಡುವ ಕತೆಯನ್ನು ಹೊಂದಿದೆ 'ಕ್ರಾಂತಿ' ಸಿನಿಮಾ.