ಮಾಯಾಬಜಾರ್ 2016 (2020)(U/A)
ಮಾಯಾಬಜಾರ್ 2016 ಕಥೆ
ಪುನೀತ್ ರಾಜಕುಮಾರ್ ರವರ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಮಾಯಾಬಜಾರ್ 2016 ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ ಗೋವಿಂದ್ ಬಂಡವಾಳ ಹೂಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.2016 ರಲ್ಲಿ ಭಾರತದ ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡುತ್ತದೆ. ಆಗ ಬೆಂಗಳೂರಿನಲ್ಲಿ ಜರುಗಿದ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಿದ್ದಾರೆ. ನಿರ್ದೇಶಕರು ಒಂದು ಗಂಭೀರ ಘಟನೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ.
ಕಥೆ: ಕೊಳಗೇರಿಯಲ್ಲಿ ಜೀವಿಸುತ್ತಿರುವ ವ್ಯಕ್ತಿ ಕುಬೇರ (ರಾಜ್ ಬಿ ಶೆಟ್ಟಿ) ಹೆಸರಿಗೆ ತಕ್ಕಹಾಗೆ ಕುಬೇರನಾಗಬೇಕು ಎನ್ನುವ ಕನಸು ಕಾಣುತ್ತ, ಕನಸನ್ನು ನನಸು ಮಾಡಿಕೊಳ್ಳಲು ಆತ ಯಾವ ಹಾದಿಯನ್ನು ತುಳಿಯಲು ಹಿಂಜರಿಯದ ಮನುಷ್ಯ. ಕೆಲಸ ವಿಲ್ಲದೆ ಖಾಲಿ ಕೂತಿರುವ ರಾಜಿ (ವಸಿಷ್ಠ ಸಿಂಹ) ಮತ್ತು ಶ್ರೀಮಂತ ಮನೆಯ ಹುಡುಗಿ ಚೈತ್ರಾ ರಾವ್ ಪ್ರೀತಿಸುತ್ತಿರುತ್ತಾರೆ. ಕರ್ತವ್ಯವೆ ದೇವರೆಂದು ನಂಬಿ ನಿಯತ್ತಿನಿಂದ ಬದುಕುತ್ತಿದ್ದ ಪೊಲೀಸ್ ಆಫೀಸರ್ ಜೋಸೆಫ್, ಪತ್ನಿ ಉಷಾ (ಸುಧಾರಾಣಿ)ಗೆ ಕ್ಯಾನ್ಸರ್ ಇರುವುದು ಗೊತ್ತಾಗುತ್ತೆ. ಮಗನ ಶಾಲೆಯ ಫೀಸ್ ಕಟ್ಟಲು ಒದ್ದಾಡುತ್ತಿದ್ದ ಜೋಸೆಫ್ ಪತ್ನಿಯ ಆಸ್ಪತ್ರೆಯ ಖರ್ಚು ಹೊಂದಿಸಲು ಪರದಾಡುವ ಸ್ಥಿತಿಗೆ ಬರುತ್ತಾರೆ. ಹೇಗಾದರು ಮಾಡಿ ಪತ್ನಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ನ್ಯಾಯದ ದಾರಿ ಬಿಟ್ಟು ಕುಬೇರನ ಜೊತೆ ಸೇರಿಕೊಳ್ಳುತ್ತಾರೆ.
ಜೋಸೆಫ್ ನ ಅಧಿಕಾರ, ಕುಬೇರನ ಕಳ್ಳ ಬುದ್ದಿ. ಇಬ್ಬರು ಸೇರಿ ಹಣ ದೋಚಲು ಪ್ರಾರಂಭಿಸುತ್ತಾರೆ. ಇದರ ನಡುವೆ ರಾಜಿ ಬಳಿ ತಗಲಾಕಿಕೊಂಡು ಕೊನೆಗೆ ಆತನನ್ನು ಇವರ ಜೊತೆ ಸೇರಿಸಿಕೊಳ್ಳುತ್ತಾರೆ. ಒಟ್ನಲ್ಲಿ ಮೂವರು ಹಣದ ಹಿಂದೆ ಓಡಲು ಪ್ರಾರಂಭಿಸುತ್ತಾರೆ. ಹಣದ ಹಿಂದೆ ಓಡುತ್ತಿದ್ದವರಿಗೆ ನೋಟ್ ಬ್ಯಾನ್ ಮತ್ತಷ್ಟು ಆಘಾತ ನೀಡುತ್ತೆ.