ನಾತಿಚರಾಮಿ (2018)(A)
ನಾತಿಚರಾಮಿ ಕಥೆ
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ`ಹರಿವು' ನಿರ್ದೇಶಕ ಮನಸೋರೆರವರ ಎರಡನೇ ಚಿತ್ರ `ನಾತಿಚರಾಮಿ'. ಚಿತ್ರದ ಮುಹೂರ್ತ ನಾಯಕ ಸಂಚಾರಿ ವಿಜಯ್ ಮತ್ತು ನಾಯಕಿ ಶೃತಿ ಹರಿಹರನ್,ನಿರ್ದೇಶಕ ಮನಸೋರೆ,ಕೆ.ಮಂಜು,ಎನ್.ಆರ್ ರಮೇಶ್ ಉಪಸ್ಥಿತಿಯಲ್ಲಿ 2018 ಫೆಬ್ರವರಿಯಲ್ಲಿ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜರುಗಿತು.
ಕಥೆ
ಚಿತ್ರದ ಶೀರ್ಷಿಕೆ `ನಾತಿಚರಾಮಿ'ಯ ಅರ್ಥ `ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ' ಎಂಬುದು. ದಾಂಪತ್ಯಕ್ಕೆ ಕಾಲಿಡುವ ಸಮಯದಲ್ಲಿ ಜೋಡಿಗಳು ಧರ್ಮ,ಅರ್ಥ,ಕಾಮದಲ್ಲೂ ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ ಎಂಬ ಕಂಕಣ ತೊಡುತ್ತಾರೆ. ಆದರೆ ಆ ಪ್ರತಿಜ್ಞೆಗೆ ಎಷ್ಟು ಜನ ಬದ್ಧರಾಗಿರುತ್ತಾರೆ ಮತ್ತು ವಾಸ್ತವ ಜೀವನದಲ್ಲಿ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಮನಸೋರೆ ಸೂಕ್ಷವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಬಚ್ಚಿಟ್ಟ ಭಾವನೆಗಳು ಸಂಕೋಚದ ಬೇಲಿ ದಾಟಿ ಬಂದಾಗ ಸಮಾಜ ಅದನ್ನು ಸ್ವೀಕರಿಸುವ ರೀತಿಯನ್ನು ಚಿತ್ರ ಸೂಕ್ಷವಾಗಿ ಪ್ರಶ್ನಿಸುತ್ತದೆ.
ಮಧುರ ದಾಂಪತ್ಯದ ಸವಿ ಪಯಣದಲ್ಲಿ ಸಾಗುತ್ತಿದ್ದ ಗೌರಿ (ಶೃತಿ ಹರಿಹರನ್) ಬದುಕಿನಲ್ಲಿ ಆಕಸ್ಮಿಕ ಪತಿಯ ನಿಧನದಿಂದ ವೈಧವ್ಯದ ಮೋಡ ಕವಿಯುತ್ತದೆ. ಅದೇ ರೀತಿ ಮಧ್ಯಮ ವರ್ಗದ ಸಿವಿಲ್ ಇಂಜಿನಿಯರ್ ಸುರೇಶ್ (ಸಂಚಾರಿ ವಿಜಯ್) ದಾಂಪತ್ಯ ದಿನನಿತ್ಯದ ಭಿನ್ನಾಭಿಪ್ರಾಯಗಳಿಂದ ತೂಗುಯ್ಯಾಲೆಯಲ್ಲಿರುತ್ತದೆ. ತನ್ನ ಗಂಡನ ಪ್ರೀತಿ ಕಾಳಜಿಯನ್ನು ಬಯಸುವ ಗೃಹಿಣಿ ಮತ್ತು ಅದಕ್ಕೇ ಸಿಡುಕು- ಸಿಡುಕಾಗಿ ಪ್ರತಿಕ್ರಯಿಸುವ ಗಂಡ ಸುರೇಶ್. ಈ ದಿನನಿತ್ಯದ ಕಿರಿಕಿರಿಯಿಂದ ಬೇಸತ್ತ ಸುರೇಶ್ ದಾಂಪತ್ಯದಾಚೆಗಿನ ಸಾಂಗತ್ಯವನ್ನು ಬಯಸುತ್ತಾನೆ, ಅದೇ ಸಮಯದಲ್ಲಿ ಪತಿಯ ನಿಧನದ ಶೋಕ ಮತ್ತು ದೈಹಿಕಸುಖದ ಬಯಕೆಗಳ ಸುಳಿಯಲ್ಲಿ ಹೋರಾಡುತ್ತಿರುವ ಗೌರಿಯ ಆಗಮನವಾಗುತ್ತದೆ. ವಿಭಿನ್ನ ಹಿನ್ನಲೆಯಿಂದ ಬರುವ ಇರ್ವರ ಮುಂದಿನ ಪಯಣ ಹೇಗೆ ಸಾಗುತ್ತದೇ ಎಂಬುದು ಚಿತ್ರದ ಕಥಾವಸ್ತು.
ಕಥಾ-ಆಶಯ
ಒಂದು ಪ್ರತಿಷ್ಟಿತ ಕಂಪನಿಯ ಉನ್ನತ ಉದ್ಯೋಗದಲ್ಲಿರುವ ಮಹಿಳೆ ,ಅವಳ ಪತಿ ಶೋಕ ಮತ್ತು ಅವಳಿಗೆ ಕಾಡುವ ದೈಹಿಕ ಬಯಕೆಗಳು,ತನ್ನ ಸಂಕೋಚವನ್ನು ಬದಿಗಿಟ್ಟು ಅದನ್ನು ವ್ಯಕ್ತಪಡಿಸಿದಾಗ ಸಮಾಜ ಅವಳನ್ನು ನೋಡುವ ಪರಿ ಹಾಗೂ ಮತ್ತೊಂದು ಕಡೆ ತನ್ನ ಪತಿಯ ಪ್ರೀತಿಗೆ ಹಪಹಪಿಸಿ ಮೂಲೆಗುಂಪಾದ ಗೃಹಿಣಿಯೊಬ್ಬಳ ತುಮುಲಗಳ ಮೇಲೆ ಚಿತ್ರ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಚಿತ್ರದ ಗೀತೆಯಾದ ``ಹಳೇ ಮೋಡದ ನೆನಪಲ್ಲೇ ಕುದಿಯುತಿದೆ ಈ ಮನ,ಹೊಸ ಮಳೆಗೂ ಈ ಇಳೆಗೂ ಸಹ ತಾನೇ ಈ ಮಿಥುನ'' ಎಂಬ ಸಾಲುಗಳು ಚಿತ್ರದ ಆಶಯವನ್ನು ಸುಂದರವಾಗಿ ವ್ಯಕ್ತಪಡಿಸುತ್ತವೆ.