ಪುಸ್ತಕ ರೂಪದಲ್ಲಿ ಕಾಯ್ಕಿಣಿ ಸುಮಧುರ ಚಿತ್ರಗೀತೆಗಳು
ಮಧುರ ಗೀತೆಗಳ ಸರದಾರ ಎಂದೇ ಖ್ಯಾತರಾದ ಜಯಂತ್ ಕಾಯ್ಕಿಣಿ ಅವರ ಸಿನಿಮಾ ಗೀತೆಗಳು ಈಗ ಪುಸ್ತಕ ರೂಪ ಪಡೆದಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಜಯಂತ್ ಕಾಯ್ಕಿಣಿ ಬರೆದ ಚಿತ್ರ ಗೀತೆಗಳು ಜನಮಾನಸವನ್ನು ತಲುಪಿವೆ. ಈಗ ಆಯ್ದ ಹಾಡುಗಳನ್ನು 'ಈ ನಯನ ನೂತನ' ಪುಸ್ತಕ ರೂಪದಲ್ಲಿ ಹೊರತರಲಾಗುತ್ತ್ತಿದೆ.
ಜಯಂತ್ ಕಾಯ್ಕಿಣಿ ಅವರ ಹಾಡುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರುತ್ತಿರುವವರು ಅವಿನಾಶ್ ಕಾಮತ್. ಈ ವಿಶಿಷ್ಟ ಕೃತಿ ಕೋಟ ವಿವೇಕ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಡಿಸೆಂಬರ್ 5ರಂದು ಲೋಕಾರ್ಪಣೆಯಾಗಲಿದೆ. ಈ ಕೃತಿಯು ಜಯಂತ್ ಕಾಯ್ಕಿಣಿ ಅವರ ಆಯ್ದ ಚಿತ್ರ ಗೀತೆಗಳ ಸ್ಪಂದನ.
ಕೃತಿಯಲ್ಲಿ ಕಾಯ್ಕಿಣಿ ಕುರಿತ ಲೇಖನಗಳು, ಬರಹಗಳು ಹಾಗೂ ಅವರ ಚಿತ್ರಗೀತೆಗಳ ವಿಮರ್ಶೆಗಳು ಇವೆ. ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ಕಾಯ್ಕಿಣಿ ಕುರಿತು ಸೊಗಸಾಗಿ ಬರೆದಿರುವ ಲೇಖನಗಳಿವೆ.
ನಾಗತಿಹಳ್ಳಿ ಚಂದ್ರಶೇಖರ್, ಖ್ಯಾತ ಗಾಯಕ ವಿಜಯ್ ಪ್ರಕಾಶ್ (ಜೈ ಹೋ ಖ್ಯಾತಿಯ), ನಟ ರಮೇಶ್ ಅರವಿಂದ್, ಪತ್ರಕರ್ತೆ ಸಂಧ್ಯಾ ಪೈ ಸೇರಿದಂತೆ ಹಲವಾರು ಮಂದಿ ಕಾಯ್ಕಿಣಿ ಕುರಿತು ಬರೆದಿದ್ದಾರೆ. ಪತ್ರಕರ್ತರು, ಲೇಖಕರು, ಸಾಹಿತಿಗಳು ಬರೆದ ಅಪೂರ್ವ ಲೇಖನಗಳು ಕೃತಿಯಲ್ಲಿ ಅಡಕವಾಗಿವೆ.
ಕಾಯ್ಕಿಣಿ ರಚಿಸಿದ 120ಕ್ಕೂ ಅಧಿಕ ಚಿತ್ರಗೀತೆಗಳಲ್ಲಿ ಆಯ್ದ 60 ಗೀತೆಗಳನ್ನು ಆಯ್ದು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಮುಂಗಾರು ಮಳೆ, ಪೃಥ್ವಿ, ಜೊತೆಗಾರ, ಹಾಗೆ ಸುಮ್ಮನೆ, ಗಾಳಿಪಟ, ಕೃಷ್ಣನ್ ಲವ್ ಸ್ಟೋರಿ, ಮಳೆಯಲಿ ಜೊತೆಯಲಿ, ಸಂಚಾರಿ, ಮಿಲನ, ಈ ಬಂಧನ, ಮನಸಾರೆ, ಬಿರುಗಾಳಿ, ನೀನೆ ಬರಿ ನೀನೆ, ಮೊಗ್ಗಿನ ಮನಸು ಮುಂತಾದ ಚಿತ್ರಗೀತೆಗಳನ್ನು ಸಂಗ್ರಹಿಸಿ ನೀಡಲಾಗಿದೆ.
ಈ ವಿಶಿಷ್ಟ ಕೃತಿಗೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಮುನ್ನುಡಿ ಬರೆದಿದ್ದಾರೆ. ಜಯಂತ್ ಕಾಯ್ಕಿಣಿ ಅವರ ಕೈಯಿಂದಲೇ ಈ ಕೃತಿ ಬಿಡುಗಡೆಯಾಗುತ್ತಿರುವುದು ವಿಶೇಷ. ಅವಿನಾಶ್ ಕಾಮತ್ ಸಂಗ್ರಹಿಸಿರುವ ಈ ಕೃತಿ ಸಂಗ್ರಹಯೋಗ್ಯ ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











