ಮಾರುಕಟ್ಟೆಗೆ 'ರಾವಣ' ಧ್ವನಿಸುರುಳಿ
ಪ್ರೀತಿಯ ಸುತ್ತ ಪರಿತಪಿಸುವ 'ರಾವಣ'ನಾಗಿ ಯೋಗೀಶ್ ಕಾಣಿಸಲಿದ್ದಾರೆ. ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟುಹಬ್ಬ್ಬದ ದಿನ ಅಕ್ಟೋಬರ್ 2ರಂದು ರಾವಣ ಚಿತ್ರದ ಧ್ವನಿಸುರುಳಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಸಿಡಿ ಮತ್ತು ಧ್ವನಿಸುರುಳಿಗಳನ್ನು ಅಕ್ಷಯ ಆಡಿಯೋ ಹೊರತಂದಿದೆ.
ಉದಯ್.ಕೆ.ಮೆಹ್ತ ಹಾಗೂ ಮೋಹನ್.ಜಿ.ನಾಯಕ್ ನಿರ್ಮಿಸಿರುವ 'ರಾವಣ ಚಿತ್ರದ ಮೊದಲಪ್ರತಿ ಸಿದ್ಧವಾಗಿದೆ. ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ರಾವಣ ರಾರಾಜಿಸಲಿದ್ದಾನೆ ಎಂದು ನಿರ್ದೇಶಕ ಯೋಗೀಶ್ ಹುಣಸೂರು ತಿಳಿಸಿದ್ದಾರೆ.ಈವರೆಗೂ ಯೋಗೀಶ್ ನಟಿಸಿರುವ ಚಿತ್ರಗಳ ಪಾತ್ರಕ್ಕಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿದ್ದು, ಅವರ ಅಭಿನಯ ಅಭಿಮಾನಿಗಳ ಮನಸೂರೆಗೊಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಜಿ ಅಭಿಮಾನ್ ರಾಯ್ಅವರ ಸಂಗೀತದಲ್ಲಿ ಚಿತ್ರದ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತ ಪಡಿಸಿದ್ದಾರೆ.ನಿರ್ದೇಶಕರೇ ಈ ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ. ಆರ್.ಗಿರಿ ಛಾಯಾಗ್ರಹಣ, ದಿನೇಶ್ ಮಂಗಳೂರ್ ಕಲೆ, ರವಿವರ್ಮ ಸಾಹಸ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಸಂಚಿತಾ ಪಡುಕೋಣೆ, ಸಂತೋಷ್, ಶ್ರೀನಿವಾಸಮೂರ್ತಿ, ದ್ವಾರಕೀಶ್, ನೀನಾಸಂ ಅಶ್ವತ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











