ಮುಂಗಾರು ಮಳೆ 2 : 'ಸರಿಯಾಗಿ ನೆನಪಿದೆ' ಜಯಂತ್ ಸಾಹಿತ್ಯ
'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಹೌದು ಮುಂಗಾರು ಮಳೆ ಚಿತ್ರದ ಸಂಗೀತ, ಸಾಹಿತ್ಯ ಇನ್ನೂ ಚಿತ್ರರಸಿಕರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಹಾಗೂ ಸೋನು ನಿಗಮ್ ಸೃಷ್ಟಿಸಿದ ಮ್ಯಾಜಿಕ್ ಮತ್ತೊಮ್ಮೆ ಕಾಣಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ಮುಂಗಾರು ಮಳೆ 2 ಹಾಡುಗಳು ಬಂದಿವೆ.
ಶಶಾಂಕ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಂಗಾರು ಮಳೆ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಜಯಂತ್ ಕಾಯ್ಕಿಣಿ ಮತ್ತೊಮ್ಮೆ ತಮ್ಮ ಗೀತ ಸಾಹಿತ್ಯದ ಮೂಲಕ ರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.
'ಸರಿಯಾಗಿ ನೆನಪಿದೆ ನನಗೆ' ಹಾಡಿನ ಮೂಲಕ ಅರ್ಮಾನ್ ಮಲಿಕ್ ಕನ್ನಡಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. [ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']
ಜಯಂತ್ ಕಾಯ್ಕಿಣಿ ಬರೆದಿರುವ ಹಾಡು ಹಾಗೂ ಅರ್ಜುನ್ ಅವರ ಸಂಗೀತ ಈಗಾಗಲೇ ಸಿನಿಪ್ರಿಯರ ಮನಗೆದ್ದಿದೆ. ಹಾಡಿನ ಸಾಹಿತ್ಯ ಇಲ್ಲಿದೆ: ನೀವು ಕೂಡಾ ಇದೇ ಧಾಟಿಯಲ್ಲಿ ನಿಮ್ಮದೇ ಸಾಹಿತ್ಯ ರಚಿಸಿ ನಮಗೆ ಕಳಿಸಬಹುದು ನಮ್ಮ ಇಮೇಲ್ ವಿಳಾಸಕ್ಕೆ ತಪ್ಪದೇ ಪತ್ರ ಕಳಿಸಿ

ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ
ಮನದಾ ಪ್ರತಿ ಗಲ್ಲಿಯೊಳಗು ನಿನ್ನದೆ ಮೆರವಣಿಗೆ
ಕನಸಿನ ಕುಲುಮೆಗೆ
ಉಸಿರನು ಊದುತಾ
ಕಿಡಿ ಹಾರುವುದು ಇನ್ನು ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ
ಕಣ್ಣಲ್ಲೆ ಇವೆ ಎಲ್ಲಾ ಕಾಗದ
ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೆ ಅನ್ಯಾಯ
ನನ್ನಯ ನಡೆ ನುಡಿ ನಿನ್ನನೇ ಬಯಸುತಾ
ಬದಲಾಗುವುದು ಇನ್ನೂ ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ
ನಿನ್ನ ನೃತ್ಯಕೆ ಸಿದ್ಧವಾಗಿದೆ
ಅಂತರಂಗ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ
ಸುದ್ದಿ ಇಲ್ಲದ ಸುದ್ದಿ ಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತಾ
ಬೆಳಗಾಗುವುದು ಇನ್ನೂ ಖಚಿತ
ಸರಿಯಾಗಿ ನೆನಪಿದೆ ನನಗೆ
ಇದಕ್ಕೆಲ್ಲ ಕಾರಣ ಕಿರು ನಗೆ
ಈ ಗೀತೆಯ ಮೇಕಿಂಗ್ ಹಾಗೂ ಸಾಹಿತ್ಯ ಇರುವ ವಿಡಿಯೋ ಝಾಂಕರ್ ಮ್ಯೂಸಿಕ್ ನಲ್ಲಿ ಲಭ್ಯ, ಇದನ್ನು ಗಣೇಶ್ ಕೂಡಾ ಹಂಚಿಕೊಂಡಿದ್ದಾರೆ.


Click it and Unblock the Notifications











