ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ನಿಖಿತಾ ಸಖತ್ ಕಿರಿಕ್
ಸಂಗೊಳ್ಳಿ ರಾಯಣ್ಣ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ ಅನ್ನುವುದು ಒಂದು ಕಡೆಯ ಸುದ್ದಿಯಾದರೆ, ಅದೇ ಚಿತ್ರದ ನಾಯಕಿ ನಿಖಿತಾ ಸಣ್ಣ ಪುಟ್ಟ ಕಿರಿಕ್ ಮಾಡಿಕೊಂಡು ನಿರ್ದೇಶಕ, ನಿರ್ಮಾಪಕರಿಂದ ಬೈಸಿಕೊಳ್ಳುತ್ತಿದ್ದಳು ಎನ್ನುವುದೂ ಸದ್ಯದ ಬಿಸಿ ಬಿಸಿ ಸುದ್ದಿಯಾಗಿದೆ. ಜೈಪುರದಲ್ಲಿ ದರ್ಶನ್ ಜೊತೆ ಸಾಂಗ್ ಶೂಟಿಂಗ್ಗಾಗಿ ತೆರಳಿದ್ದ ನಿಖಿತಾರನ್ನು ರೂಮಿನಿಂದ ಕರೆಸಿ, ಬಣ್ಣ ಹಚ್ಚಿಸುವುದೇ ಒಂದು ದೊಡ್ಡ ಸಾಹಸ.
ಐದು ನಿಮಿಷ ಕುಣಿದರೂ ನಿಖಿತಾ ಬೆವರು ತುಂಬಿದ ಮುಖವನ್ನು ಸಪ್ಪೆ ಮಾಡಿಕೊಂಡು, ತನ್ನ ಗೆಸ್ಟ್ ಹೌಸ್ ಕಡೆ ದೌಡಾಯಿಸಿಬಿಡುತ್ತಿದ್ದರಂತೆ. ಶ್ರೀನಿವಾಸಮೂರ್ತಿ, ಶಶಿಕುಮಾರ್ರಂಥ ದೊಡ್ಡ ದೊಡ್ಡ ನಟರನ್ನಾದರೂ ಸಹಿಸಿಕೊಳ್ಳಬಹುದು, ನಿನ್ನೆ ಮೊನ್ನೆ ಬಂದ ನಿಖಿತಾರನ್ನು ಸಹಿಸಿಕೊಳ್ಳುವುದು ಕಷ್ಟ ಎಂದು ಬೆವರು ಒರೆಸಿಕೊಳ್ಳುತ್ತಾರೆ ಚಿತ್ರದ ಸಹ ನಿರ್ಮಾಪಕ ಕಮ್ ಕತೆ, ಚಿತ್ರಕತೆ, ಸಂಭಾಷಣೆಕಾರ ಕೇಶವಾದಿತ್ಯ!
ಅಂದಹಾಗೇ ಜೈಪುರ ಚಿತ್ರೀಕರಣ ವೇಳೆ ನಟ ಶ್ರೀನಿವಾಸಮೂರ್ತಿ ಬದುಕುಳಿದಿದ್ದೇ ದೊಡ್ಡ ವಿಷಯವಂತೆ. ಕುದುರೆ ಮೇಲೆ ಕೂತು ಹೋಗುವಾಗ ಮೂರ್ತಿಗಳು ಆಯತಪ್ಪಿ ಬಿದ್ದರಂತೆ. ಕೈಕಾಲುಗಳು ಕುದುರೆಯ ಹಗ್ಗಕ್ಕೆ ಸಿಕ್ಕಿ ನೆಲಕ್ಕುರುಳಿದರಂತೆ. ಕೊನೆಗೆ ಸ್ವತಃ ದರ್ಶನ್ ಅವರೇ ಸಿನಿಮಾದಲ್ಲಿ ಅಸಲಿ ನಾಯಕ ಮಾಡುವ ಸಾಹಸವನ್ನೇ ಮಾಡಿ, ಮೂರ್ತಿ ಅವರನ್ನು ಬಚಾವ್ ಮಾಡಿದರಂತೆ!
ಅಂದಹಾಗೇ ಸಂಗೊಳ್ಳಿ ರಾಯಣ್ಣ ಅರವತ್ತು ಭಾಗದ ಚಿತ್ರೀಕರಣ ಮುಗಿಸಿದೆ. ಚಿತ್ರ ಬಿಡುಗಡೆ ಹೊತ್ತಿಗೆ ಬರೊಬ್ಬರಿ ಇಪ್ಪತ್ತು ಕೋಟಿ ವೆಚ್ಚದ ಚಿತ್ರವಾದರೆ ಆಶ್ಚರ್ಯವಿಲ್ಲ. ಜೈಪುರದ ಬರೀ ಯುದ್ಧದ ಸನ್ನಿವೇಶಕ್ಕೆ ಬರೀ ಎಂಟು ಕೋಟಿ ಮಾತ್ರ ಖರ್ಚಾಗಿದೆ!


Click it and Unblock the Notifications











