ನಿತ್ಯಾನಂದ ಆಶ್ರಮಕ್ಕೆ ಮತ್ತೆ ಹೋಗುವುದಿಲ್ಲ: ತಾರಾ
ಪರಮಹಂಸ ನಿತ್ಯಾನಂದ ಸ್ವಾಮಿಯ ಉಪಾಸಕಿಯಾಗಿರುವ ನಟಿ ತಾರಾ ಇದೀಗ ಸ್ವಾಮೀಜಿ ಬಗ್ಗೆ ಬೇಸರಗೊಂಡಿದ್ದಾರೆ. ಲೈಂಗಿಕ ಹಗರಣದ ವಿಡಿಯೋ ಕಂಡು ಆಘಾತಗೊಂಡಿದ್ದಾರೆ. ಸನ್ ಟಿವಿ ಪ್ರಸಾರ ಮಾಡಿದ ನಿತ್ಯಾನಂದನ ರಾಸಲೀಸೆ ನೋಡಿ ಸ್ವಾಮೀಜಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ನಿತ್ಯಾನಂದ ಸ್ವಾಮೀಜಿ ಅವರನ್ನು ಭೂಮಿ ಮೇಲಿರುವ ದೇವರು ಎಂದು ನಂಬಲಾಗಿತ್ತು. ಅವರಿಗೆ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಭಕ್ತರು ಹಾಗೂ ದೇಶ ವಿದೇಶಗಳಲ್ಲಿ ಸಾವಿರಾರು ಆಶ್ರಮಗಳಿವೆ ಎಂದು ಟಿವಿ9 ಕನ್ನಡ ಸುದ್ದಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಸ್ವಾಮೀಜಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಿದರು.
ಸ್ವಾಮೀಜಿ ಲೈಂಗಿಕ ಹಗರಣದಲ್ಲಿ ಭಾಗಿಯಾಗಿವ ಮೂಲಕ ಅವರ ಅಪಾರ ಅನುಯಾಯಿಗಳನ್ನು ಮೋಸ ಮಾಡಿದ್ದಾರೆ. ಈ ರೀತಿಯ ಘಟನೆಗಳಿಂದ ಸಾಮಾನ್ಯ ಜನರು ದೇವರಲ್ಲೂ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಹಿಂದು ಸಂಸ್ಕೃತಿ ಮತ್ತು ಧರ್ಮಕ್ಕೆ ನಿತ್ಯಾನಂದ ಅಪಚಾರವೆಸಗಿದ್ದಾರೆ ಎಂದಿದ್ದಾರೆ ತಾರಾ.
ಬೆಂಗಳೂರಿನ ಕೊಳಗೇರಿಯ ಮಕ್ಕಳೊಂದಿಗೆ ನಟಿ ತಾರಾ ಇಂದು (ಮಾ.4) ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಹುಟ್ಟುಹಬ್ಬದ ದಿನ ದೇವಸ್ಥಾನ, ಆಶ್ರಮಗಳಿಗೆ ಭೇಟಿ ನೀಡುವುದು ತಾರಾ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಆಚಾರ. ಆದರೆ ಈ ಬಾರಿ ಅವರು ಯಾವುದೇ ಆಶ್ರಮಕ್ಕೆ ಭೇಟಿ ನೀಡಲಿಲ್ಲ. ಇನ್ನೆಂದಿಗೂ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡುವುದಿಲ್ಲ ಎಂದು ತಾರಾ ಹೇಳಿದ್ದಾರೆ.


Click it and Unblock the Notifications











