ಆನಂದ್ ಚಿತ್ರದಿಂದ ಇಲ್ಲಿಯ ತನಕ ಶಿವಣ್ಣನ ಚಿತ್ರಲೋಕ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಚಿತ್ರಲೋಕ ಡಾಟ್ ಕಾಂ ಆಯೋಜಿಸಿದೆ. ಆಗಸ್ಟ್ 6ರಂದು ಶಿವಣ್ಣನ 'ಚೆಲುವೆಯೇ ನಿನ್ನೇ ನೋಡಲು' ಚಿತ್ರ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನರ್ತಕಿ ಚಿತ್ರಮಂದಿರದಲ್ಲಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಶಿವಣ್ಣನ ಮೊಟ್ಟ ಮೊದಲ 'ಆನಂದ್' ಚಿತ್ರದಿಂದ ಹಿಡಿದು ಈಗ ತೆರೆಕಾಣುತ್ತಿರುವ 'ಚೆಲುವೆಯೇ ನಿನ್ನೇ ನೋಡಲು' ಚಿತ್ರದ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಜೊತೆಗೆ ಮೈಲಾರಿ, ಜೋಗಯ್ಯ ಹಾಗೂ ಆಪರೇಷನ್ ಗೋಲ್ಡನ್ ಗ್ಯಾಂಗ್ ಚಿತ್ರದ ಭಿತ್ತಿ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.
ಕನ್ನಡ ಚಿತ್ರಗಳ ಛಾಯಾಚಿತ್ರ ಪ್ರದರ್ಶನಕ್ಕೆ 2006 ಮತ್ತು 2009ರಲ್ಲಿ ಎರಡು ಬಾರಿ ಚಿತ್ರಲೋಕ ಡಾಟ್ ಕಾಂನ ಸಂಪಾದಕ ಕೆ ಎಂ ವೀರೇಶ್ ಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒಲಿದಿದೆ. 2006ರಲ್ಲಿ ವೀರೇಶ್ ಮೊಟ್ಟಮೊದಲ ಚಿತ್ರಪ್ರದರ್ಶನವನ್ನು ಆಯೋಜಿಸಿದ್ದರು. 1934ರಲ್ಲಿ ತೆರೆಕಂಡ 'ಸತಿ ಸುಲೋಚನಾ' ಚಿತ್ರ ಸೇರಿದಂತೆ ಒಟ್ಟು 2650 ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದರು.
ಇಸವಿ 2009ರಲ್ಲಿ ಕನ್ನಡಚಿತ್ರರಂಗ ಅಮೃತ ಮಹೋತ್ಸವ ಆಚರಿಸಿಕೊಂಡ ಪ್ರಯುಕ್ತ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದರು. ಆಗ ಕನ್ನಡ ಚಿತ್ರಗಳ 3000 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಈಗ ಶಿವಣ್ಣನ ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ನರ್ತಕಿಯಲ್ಲಿ ಶಿವಣ್ಣನ ಸಿಂಹಾವಲೋಕನವನ್ನು ಸವಿಯಬಹುದು.


Click it and Unblock the Notifications











