ರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ

ನಂದ ನಂದಿತನಿಗೆ ಕತೆ ಬರೆದಿದ್ದ ಅಜಯ್ಕುಮಾರ್ ಈ ಚಿತ್ರಕ್ಕೂ ಕತೆ ಬರೆಯುವ ಹೊಣೆ ಹೊತ್ತಿದ್ದಾರೆ. ವಾತ್ಸಲ್ಯಭರಿತ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಪ್ರಮುಖರೆನಿಸಿರುವ ಓಂ.ಸಾಯಿಪ್ರಕಾಶ್ 'ಭಾಗ್ಯದ ಬಳೆಗಾರ'ನನ್ನು ನಿರ್ದೇಶಿಸುತ್ತಿದ್ದಾರೆ. ಪ್ರಸ್ತುತ ಬಳೆಗಾರ ರಾಮನಗರದಲ್ಲಿ ಬೀಡುಬಿಟ್ಟಿದ್ದಾನೆ. ಈ ತಿಂಗಳು ಪೂರ್ತಿ ಚಿತ್ರಕ್ಕೆ ರೇಷ್ಮೆನಗರದಲ್ಲೇ ಚಿತ್ರೀಕರಣ ನಡೆಯಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ 'ಭಾಗ್ಯದ ಬಳೆಗಾರ'ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಂದರ ಪ್ರಾಕೃತಿಕ ಸ್ಥಳಗಳಲ್ಲಿ ಚಿತ್ರೀಕೃತವಾಗುವ ಬಳೆಗಾರನನ್ನು ಪಿ.ಕೆ.ಎಚ್ ದಾಸ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರಪ್ರಸಾದ್, ಆನಂದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿಪ್ರಕಾಶ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಆದರ್ಶ, ಆದಿಲೋಕೇಶ್, ಸತ್ಯಜಿತ್, ಸುಮಿತ್ರ, ಅಮೃತ, ಪದ್ಮಾವಾಸಂತಿ, ರಮೇಶ್ಭಟ್, ಶೋಭಾರಾಘವೇಂದ್ರ, ಪ್ರಕಾಶ್ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿಸಾಯಿಕೃಷ್ಣ, ಸುರೇಶ್ಮಂಗಳೂರು ಮುಂತಾದವರಿದ್ದಾರೆ. ಅಪ್ಪಟ್ಟ ಕನ್ನಡತಿಯೊಬ್ಬಳು 'ಭಾಗ್ಯದ ಬಳೆಗಾರ'ನಾಯಕಿಯಾಗುವ ಸಾಧ್ಯತೆಯಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











