ಶತಮಾನದ ಶ್ರೇಷ್ಠ ಚಿತ್ರವಾಗಿ 'ಘಟಶ್ರಾದ್ಧ'
ಗಿರೀಶ್ ಕಾಸವಳ್ಳಿ ನಿರ್ದೇಶನದ ಚೊಚ್ಚಲ ಚಿತ್ರ 'ಘಟಶ್ರಾದ್ಧ' ಶತಮಾನದ 20 ಸರ್ವಶ್ರೇಷ್ಠ ಚಿತ್ರಗಳಲ್ಲಿ ಸ್ಥಾನಪಡೆದಿದೆ. ಯು ಆರ್ ಅನಂತಮೂರ್ತಿ ಅವರ ಸಣ್ಣಕತೆ ಆಧಾರವಾಗಿ ಈ ಚಿತ್ರವನ್ನು 1977ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದರು. ಈ ಚಿತ್ರದ ಪರವಾಗಿ 1.6 ಮಿಲಿಯನ್ ಜನರು ಮತ ಚಲಾಯಿಸಿದ್ದಾಗಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಕಟಿಸಲಾಗಿದೆ.
ಕಪ್ಪು ಬಿಳುಪು ಚಿತ್ರವಾದ 'ಘಟಶ್ರಾದ್ಧ' 1977ರಲ್ಲಿ ತೆರೆಕಂಡಿತ್ತು. ಮೀನಾ, ಅಜಿತ್, ನಾರಾಯಣ ಭಟ್, ರಾಮಕೃಷ್ಣ, ಬಿ ಸುರೇಶ್ ಮತ್ತು ಶಾಂತಾ ಅವರು ಚಿತ್ರದಲ್ಲಿ ಅಭಿನಯಿಸಿದ್ದರು. ಬಿ ವಿ ಕಾರಂತರ ಸಂಗೀತ ಸಂಯೋಜನೆ ಮತ್ತು ಎಸ್ ರಾಮಚಂದ್ರ ಅವರ ಛಾಯಾಗ್ರಹಣ ಘಟಶ್ರಾದ್ದ್ಧ ಚಿತ್ರಕ್ಕಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿರೀಶ್ ಕಾಸರವಳ್ಳಿ, ಇದೊಂದು ಶಕ್ತಿಯುತವಾದ ಹಾಗೂ ಅಸಾಮಾನ್ಯ ಕತೆಯಾಗಿತ್ತು. ಬ್ರಾಹ್ಮಣರ ಸಂಪ್ರದಾಯ, ಕ್ರಿಯಾವಿಧಿಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ. ನಾನು ಆಗ ತಾನೆ ಪುಣೆ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ಪದವಿ ಮುಗಿಸುಕೊಂಡು ಬಂದಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದರು.
ಯಮುನಕ್ಕ ಪಾತ್ರಕ್ಕಾಗಿ ಆಗ ವಿದ್ಯಾರ್ಥಿನಿಯಾಗಿದ್ದ ಮೀನಾ ಕುಟ್ಟಪ್ಪ ಅವರನ್ನು ಆಯ್ಕೆ ಮಾಡಿಕೊಂಡಿದ್ದೆ. ಈ ಚಿತ್ರಕ್ಕೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ(ಸ್ವರ್ಣ ಕಮಲ)ಗಳೆರಡನ್ನೂ ಪಡೆಯಿತು ಎಂದು ವಿವರ ನೀಡಿದರು. ಸುವರ್ಣಗಿರಿ ಫಿಲಂಸ್ ಲಾಂಛನದಲ್ಲಿ ಚಿತ್ರವನ್ನು ಸದಾನಂದ ಸುವರ್ಣ ನಿರ್ಮಿಸಿದ್ದರು.
ಚಿತ್ರಕತೆ ಹೀಗಿದೆ: ಬಾಲ ವಿಧವೆಯಾದ ಯಮುನಕ್ಕನಿಗೆ ಶಾಲಾ ಶಿಕ್ಷಕನೊಂದಿಗೆ ಸಂಬಂಧವಿರುತ್ತದೆ. ಆಕೆ ಗರ್ಭಿಣಿಯಾಗುತ್ತಾಳೆ. ಗರ್ಭಪಾತ ಮಾಡಿಸುವ ಸಲುವಾಗಿ ಆಕೆಗೆ ಶಾಲಾ ಶಿಕ್ಷಕ ವ್ಯವಸ್ಥೆ ಮಾಡಿಸುತ್ತಾನೆ. ಶಾಲೆಯಿಂದ ಇಬ್ಬರೂ ಕಾಣೆಯಾಗುತ್ತಾರೆ. ಯಮುನಕ್ಕ ಗರ್ಭಿಣಿಯಾಗಿರುವ ವಿಚಾರ ಹಿರಿಯರಿಗೆ ತಿಳಿಯುತ್ತದೆ.
ಯಮುನಕ್ಕನ ತಂದೆಗೂ ಈ ವಿಚಾರ ಗೊತ್ತಾಗುತ್ತದೆ. ಯಮುನಕ್ಕನ ತಂದೆ ಆಕೆ ಜೀವಂತವಿರುವಾಗಲೇ ಘಟಶ್ರಾದ್ಧ ಮಾಡಿ ಮುಗಿಸುತ್ತಾರೆ. ಇದಕ್ಕೆ ಸಮಾಜದಲ್ಲೂ ಒಮ್ಮತ ವ್ಯಕ್ತವಾಗುತ್ತದೆ. ಇನ್ನೊಂದೆಡೆ ವಿಧುರನಾದ ಆಕೆಯ ತಂದೆಗೆ ಹೆಂಡತಿ ಸತ್ತಾಗ ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಅನುವು ಮಾಡುತ್ತದೆ. ಸಮಾಜದ ಅನಿಷ್ಠ ಪದ್ಧತಿಯ ವಿರುದ್ಧ 1977ರ ಹೊತ್ತಿನಲ್ಲೇ ಸಿನಿಮಾ ಮೂಲಕ ಕಾಸರವಳ್ಳಿ ಧ್ವನಿ ಎತ್ತಿರುವುದು ಗಮನಸೆಳೆಯುವ ಅಂಶಗಳು. (ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











