ಪುನೀತ್ ಯಾಕೆ ಇಷ್ಟೊಂದು ಸೊರಗಿ ಹೋಗಿದ್ದಾರೆ?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಗುರುವಾರ (ಆ. 4) ನಮ್ಮ ಚಿತ್ರತಂಡ ಸದಸ್ಯರು ನೋಡಿದಾಗ ಒಂದು ಕ್ಷಣ ಅವಾಕ್ಕಾದರು. ತುಂಬಾ ಸ್ಲಿಮ್ ಆಗಿರುವ ಅಪ್ಪು ಅವರ ದೇಹ ತೂಕ ಕಮ್ಮಿಯೆಂದರೂ ಹತ್ತು ಕೆಜಿ ಯಷ್ಟಾದರೂ ಕಮ್ಮಿಯಾಗಿರಬೇಕು. ಆದರೂ ಲವಲವಿಕೆಯಿಂದ ಇದ್ದ ಪುನೀತ್ ಕಾಲೇಜ್ ಹುಡುಗನ ತರಹ ಕಾಣಿಸುತ್ತಿದ್ದರು. ಬಹುಶಃ ಭಟ್ಟರ 'ಪರಮಾತ್ಮ' ಚಿತ್ರಕ್ಕಾಗಿ ಅವರು ಈ ಗೆಟಪ್ ಇರಬಹುದು.
ಅರುವತ್ತರ ದಶಕದಲ್ಲಿ ದಕ್ಷಿಣ ಚಿತ್ರರಂಗ ಕಂಡ ಮಹಾನ್ ನಿರ್ದೇಶಕ ದಿ. ಬಿ. ಆರ್ ಪಂತುಲು ಅವರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಪುನೀತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು, ಪಂತುಲು ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಆದರೆ ತನ್ನ ಸೋದರ ಸಂಬಂಧಿಗಳಾದ ವಿಜಯ ರಾಘವೇಂದ್ರ ಮತ್ತು ಮುರಳಿ ಜೊತೆ ಪಂತುಲು ಅವರ 'ಸ್ಕೂಲ್ ಮಾಸ್ಟರ್' ಚಿತ್ರವನ್ನು ಕಡಿಮೆಯೆಂದರೂ ನಲವತ್ತು ಬಾರಿ ನೋಡಿದ್ದೆ.
ಈಗಲೂ ಸಮಯ ಸಿಕ್ಕಾಗ ಆ ಚಿತ್ರವನ್ನು ನೋಡುತ್ತೇನೆ. ನಾನು ಇಷ್ಟಪಟ್ಟ ಅತ್ಯುತ್ತಮ ಚಿತ್ರಗಳಲ್ಲಿ ಅದೊಂದು. ಆ ಚಿತ್ರದ ಕೆಲವೊಂದು ದೃಶ್ಯಗಳು ಈಗಲೂ ನನ್ನ ಕಣ್ಣ ಮುಂದೆ ಬರುತ್ತೆ. ಈ ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿದ್ದಕ್ಕೆ ಥ್ಯಾಂಕ್ಸ್ ಎಂದರು.
ನಗರದ ಬಾದಾಮಿ ಹೌಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಂತುಲು ಚಿತ್ರದಲ್ಲಿ ನಟಿಸಿದ್ದ ಬಿ. ಸರೋಜಾದೇವಿ ಮತ್ತು ಭಾರತಿ ವಿಷ್ಣುವರ್ಧನ್ ಕೂಡ ಭಾಗವಹಿಸಿದ್ದರು. ಅವರು ಪಂತುಲು ಜೊತೆಗಿನ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿದರು. ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಅಮ್ಮ, ರತ್ನಗಿರಿ ರಹಸ್ಯ, ಎಮ್ಮೆ ತಮ್ಮಣ್ಣ ಮುಂತಾದ ಸಾಲುಸಾಲು ಹಿಟ್ ಚಿತ್ರಗಳನ್ನು ಪಂತುಲು ನೀಡಿದ್ದರು.
ಪಂತುಲು ಸ್ಮರಣಾರ್ಥ ಸಿಡಿ ಬಿಡುಗಡೆಗೊಳಿಸಲಾಯಿತು. ಸರಿಗಮ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು. ದಾವಣಗೆರೆಯ ರಾಮಚಂದ್ರ ಆಚಾರ್ ಅವರ ತಂಡದ ಯುವ ಪ್ರತಿಭೆಗಳು ಪಂತುಲು ಚಿತ್ರದ ಕೆಲವೊಂದು ಸುಶ್ರಾವ್ಯ ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











