ಫಲಿಸಿತು ಒಲವಿನ ಪೂಜಾ ಫಲ; ಒಲವೇ ಮಂದಾರ
ಸದಭಿರುಚಿಯ ಚಿತ್ರಗಳನ್ನು ಪ್ರೇಕ್ಷಕ ಕೈಬಿಡಲ್ಲ ಎಂಬುದಕ್ಕೆ ತಾಜಾ ಉದಾಹರಣೆ 'ಒಲವೇ ಮಂದಾರ'. ಈ ಚಿತ್ರ ಅರ್ಧ ಶತಕ ದಾಟಿ ಈಗ 75 ದಿನಗಳನ್ನು ಪೂರೈಸುವುದರಲ್ಲಿದ್ದು ಖಂಡಿತವಾಗಿಯೂ ಶತಕ ಬಾರಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಗೋವಿಂದರಾಜು. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.
ತಮ್ಮ ಚೊಚ್ಚಲ ಚಿತ್ರದಲ್ಲೆ ಗೋವಿಂದರಾಜು ಅವರ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿರುವುದು ಚಿತ್ರತಂಡದಲ್ಲಿ ಹೊಸ ಹುರುಪು ಮೂಡಿಸಿದೆ. ಸರಿಸುಮಾರು ರು.3.5 ಕೋಟಿಯಲ್ಲಿ ನಿರ್ಮಿಸಿದ ಚಿತ್ರ ನಿರ್ಮಾಪಕರ ಜೇಬಿಗೂ ಸಾಕಷ್ಟು ಲಾಭವನ್ನೆ ತಂದುಕೊಟ್ಟಿದೆ. ಚಿತ್ರದ ನಿರ್ದೇಶಕ ಜಯತೀರ್ಥ, ಛಾಯಾಗ್ರಾಹಕ ರವಿಕುಮಾರ್ ಸನಾ, ನಟ ಶ್ರೀಕಾಂತ್ ಅವರ ಪ್ರತಿಭೆ ಚಿತ್ರದ ಮೂಲಕ ಹೊರಬಿದ್ದಿದೆ.
ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ರಾಜ್ಯದ 36 ಚಿತ್ರಮಂದಿರಗಳಲ್ಲಿ 'ಒಲವೇ ಮಂದಾರ' ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ರಂಗಭೂಮಿಯಲ್ಲಿ ಪಳಗಿದ ಜಯತೀರ್ಥ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ನಿರ್ಮಾಪಕರ ಮಗ ಶ್ರೀಕಾಂತ್ ಹಾಗೂ ನಾಯಕಿ ಆಕಾಂಕ್ಷ ಅವರಿಗೆ ಇದು ಚೊಚ್ಚಲ ಚಿತ್ರ. ಈ ಚಿತ್ರದ ಮೂಲಕ ಜಯತೀತೀರ್ಥರು ಪ್ರೀತಿಯ ಹಲವು ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಸತ್ಯ ಘಟನೆ ಆಧರಿಸಿದ ಎರಡು ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತವೆ.


Click it and Unblock the Notifications











