ತೋಪು ಕನ್ನಡ ನಿರ್ದೇಶಕರ ಯಶಸ್ಸಿನ ಸೂತ್ರ

By Staff

Dinesh Babu
ಗಾಂಧಿನಗರದ ಸದ್ಯದ ಎರಡು ಫಾರ್ಮುಲಾ ಏನು? ಒಂದು ಆದಷ್ಟು ಬೇಗ ರೀಲು ಸುತ್ತಿ ಸಿನಿಮಾ ತೆಗಿ. ಇನ್ನೊಂದು ಸಂಗೀತದ ಮೇಲೆ ಸಿನಿಮಾ ಬ್ಯಾಂಕ್ ಮಾಡಿಕೋ.

*ಜಯಂತಿ

ಮೊದಲನೇ ಫಾರ್ಮುಲಾ ನಂಬಿದವರು ಸಾಯಿಪ್ರಕಾಶ್, ದಿನೇಶ್ ಬಾಬು ತರಹದವರು. ಎರಡನೇ ಫಾರ್ಮುಲಾ ಒಪ್ಪಿದವರ ಸಂಖ್ಯೆ ದೊಡ್ಡದಿದೆ. ಕಳೆದ ಐದು ವರ್ಷಗಳಲ್ಲಿ ಸಾಯಿಪ್ರಕಾಶ್ ಕನ್ನಡದ ಸುಮಾರು ಮೂವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲವಕುಶ, ಒಡಹುಟ್ಟಿದವಳು, ಸಿಟಿಜನ್, ಹೆತ್ತರೆ ಹೆಣ್ಣನ್ನೇ ಹೆರಬೇಕು ತರಹದ ತೋಪಾನುತೋಪು ಚಿತ್ರಗಳೂ ಅದರಲ್ಲಿ ಸೇರಿವೆ. ಮೇಲಿಂದ ಮೇಲೆ ಫ್ಲಾಪ್ ಕೊಟ್ಟರೂ ಅವರ ಬೇಡಿಕೆ ಕಡಿಮೆಯಾಗಿಲ್ಲ. ತೆಲುಗು ದೇಶದಿಂದ ಇಲ್ಲಿಗೆ ಬಂದು, ಸಲೀಸಾಗಿ ಅಡ್ಡಾಡಿಕೊಂಡು ಅವರು ಒಂದು ಸಿನಿಮಾ ಮುಗಿಸುವ ಹೊತ್ತಿಗೆ ಮೂರು ಚಿತ್ರಗಳು ಹುಡುಕಿಕೊಂಡು ಬರುತ್ತವಂತೆ. ಸೆಂಟಿಮೆಂಟಿನ ಸಬ್ಜೆಕ್ಟ್ ಮಾಡಹೊರಟವರ ಪಾಲಿಗೆ ಇವರೇ ಪೆಪ್ಪರ್‌ಮಿಂಟ್.

ಸಾಯಿಪ್ರಕಾಶ್ ನಿರ್ಮಾಪಕ ಫ್ರೆಂಡ್ಲಿ. ಇಪ್ಪತ್ತೈದು, ಮೂವತ್ತು ದಿನದಲ್ಲಿ ಸಿನಿಮಾ ಸುತ್ತಿಕೊಡಬಲ್ಲ ಅನುಭವಿ. ಹಾಗಾಗಿ ಅವರನ್ನು ನೆಚ್ಚಿಕೊಳ್ಳುವವರಿಗೆ ಕೊರತೆ ಇಲ್ಲ. ತವರಿಗೆ ಬಾ ತಂಗಿ, ಅಣ್ಣ ತಂಗಿ, ತವರಿನ ಸಿರಿ ಚಿತ್ರಗಳ ಗೆಲುವು ಸಾಯಿಪ್ರಕಾಶ್ ಅವಕಾಶದ ಆಯುಸ್ಸನ್ನು ಇಷ್ಟು ದೊಡ್ಡದಾಗಿಸಿರುವುದು ತಮಾಷೆ.

ಸುತ್ತುವುದರಲ್ಲಿ ಇನ್ನೊಬ್ಬ ನಿಸ್ಸೀಮ ದಿನೇಶ್ ಬಾಬು. ಟಿವಿ ರೈಟ್ಸ್ ಲೆಕ್ಕ ಮುಂದಿಟ್ಟುಕೊಂಡು ಇವರು ನಿರ್ಮಾಪಕರನ್ನು ಓಲೈಸುತ್ತಾರೆ. ವಿಷ್ಣುವರ್ಧನ್ ಕೃಪಾಪೋಷಿತ ದಿನೇಶ್ ಬಾಬು ಮೂಲತಃ ಪ್ರತಿಭಾವಂತ. ಆದರೆ, ಇದ್ದಕ್ಕಿದ್ದಂತೆ ಅವರಿಗೆ ಅವಕಾಶಗಳು ಬಂದ್ ಆದವು. ಆಗ ಅವರು ಅಳವಡಿಸಿಕೊಂಡ ತಂತ್ರ ಸುತ್ತುವುದು ಸಾರ್ ಸುತ್ತುವುದು.

ನಲವತ್ತು ಚಿಲ್ಲರೆ ಲಕ್ಷ ಬಜೆಟ್‌ನಲ್ಲಿ ಸಿದ್ಧಗೊಂಡ ಮಿಸ್ಟರ್ ಗರಗಸ ಚಿತ್ರ ಹಣ ಮಾಡಿತು. ದಿನೇಶ್ ಬಾಬು ವ್ಯವಹಾರ ಮತ್ತೆ ಕುದುರತೊಡಗಿತು. ಒಂದೂವರೆ ತಿಂಗಳಲ್ಲಿ ಸಿನಿಮಾ ಮಾಡಿಕೊಡುವ ವ್ಯಾಪಾರಕ್ಕೆ ಅವರು ಮುಂದಾದರು. ಅದರ ಫಲವೇ ಗಣೇಶ್, ಜನುಮದ ಗೆಳತಿ. ಜನುಮದ ಗೆಳತಿಯಂತೂ ದಿನೇಶ್ ಬಾಬು ಸಿನಿಮಾನಾ ಇದು ಅನ್ನುವಷ್ಟು ಗಬ್ಬಾಗಿತ್ತು. ಇಷ್ಟಾಗಿಯೂ ಹಾಸ್ಯನಟರ ದೊಡ್ಡ ದಂಡು ದಿನೇಶ್ ಬಾಬು ಅವರನ್ನು ನಂಬುತ್ತಿದೆ. ಕಡಿಮೆ ಬಜೆಟ್, ಕಡಿಮೆ ಅವಧಿ, ಹಿಟ್ ಚಿತ್ರ ಇಷ್ಟೂ ಸಾಧ್ಯವಿರುವ ಕಮರ್ಷಿಯಲ್ ನಿರ್ದೇಶಕ ಅವರೊಬ್ಬರೇ ಅಂತ ನಂಬಿದವರ ಸಂಖ್ಯೆಯೂ ದೊಡ್ಡದಿದೆ.

ಸಂಗೀತ ಗೆದ್ದರೆ ಸಿನಿಮಾ ಗೆಲ್ಲುತ್ತದೆ ಅನ್ನೋದು ಇನ್ನೊಂದು ಮೂಢನಂಬಿಕೆ. ಗಜ, ಬುದ್ಧಿವಂತ, ಜಂಗ್ಲಿ, ಅಂಬಾರಿ ಚಿತ್ರಗಳನ್ನು ಸಂಗೀತ ಗೆಲ್ಲಿಸಿದ್ದು ನಿಜ. ಆದರೆ, ಸಂಗೀತ ಗೆದ್ದೂ ಸೋತ ಚಿತ್ರಗಳ ಪಟ್ಟಿಯನ್ನು ಅನೇಕರು ನೋಡುತ್ತಿಲ್ಲ. ನವಗ್ರಹ, ಹಾಗೆ ಸುಮ್ಮನೆ, ಪಯಣ, ಅರ್ಜುನ್, ಬೊಂಬಾಟ್, ಸಂಗಮ, ಸರ್ಕಸ್ ಈ ಚಿತ್ರಗಳ ಕಥೆ ಏನಾದವು ನೋಡಿ? ಹಾಡುಗಳಿಗೆ ಈಗ ಪ್ರತ್ಯೇಕ ಬಜೆಟ್ ಮೀಸಲಿಡುವ ಪದ್ಧತಿ ಇದೆ. ಸಂಗೀತ ನಿರ್ದೇಶಕರು ಕನಿಷ್ಠ ಮೂವತ್ತೈದು, ನಲವತ್ತು ಲಕ್ಷ ಪ್ಯಾಕೇಜ್ ಕೇಳುತ್ತಿದ್ದಾರೆ.

ಗುರುಕಿರಣ್ ತಾವೇ ಎರಡೆರಡು ಹಾಡುಗಳನ್ನು ಹಾಡಿ ನಿರ್ಮಾಪಕರ ಕಿವಿಯಲ್ಲಿ ಲಾಲ್‌ಬಾಗ್ ಇಡುತ್ತಿದ್ದಾರೆ. ಮನೋಮೂರ್ತಿ ಭರಾಟೆ ಕಡಿಮೆಯಾದರೂ ಅವರ ಪ್ಯಾಕೇಜ್ ಬೆಲೆ ಅರುವತ್ತು ಲಕ್ಷ. ಇನ್ನು ಹಾಡುಗಳ ಚಿತ್ರೀಕರಣ. ಅದು ಇನ್ನೂ ದುಬಾರಿ. ಯುವ ಚಿತ್ರದ ಒಂದು ಹಾಡಿಗೆ ಕಾಲು ಕೋಟಿ ಖರ್ಚು ಮಾಡಲಾಗಿದೆ ಅಂತ ನಿರ್ದೇಶಕ ನರೇಂದ್ರ ಬಾಬು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಗೌತಮ್ ಚಿತ್ರಕ್ಕೆ ಕೇರಳದಲ್ಲಿ ಒಂದು ಹಾಡನ್ನು ರೀಶೂಟ್ ಮಾಡಿದ್ದರು. ಜೇಬಿಗೆ ಅದು ಏನಿಲ್ಲವೆಂದರೂ ಹದಿನೈದು ಲಕ್ಷ ಹೊರೆಯಾಗಿದೆ. ಸ್ಟಾರ್‌ಗಳ ಸಿನಿಮಾಗಳಲ್ಲಿ ಹಾಡುಗಳ ಚಿತ್ರೀಕರಣಕ್ಕೆ ಕಡಿಮೆ ಅಂದರೂ ಒಂದು ಕೋಟಿ ಎತ್ತಿಡಬೇಕು.

ಅಂದರೆ, ಒಂದು ಕಮರ್ಷಿಯಲ್ ಸಿನಿಮಾ ಈಸ್ ಈಕ್ವಲ್ ಟು ಎಂಟು ಆರ್ಟ್ ಸಿನಿಮಾ. ಆದರೆ, ವ್ಯಾಪಾರ ಮತ್ತು ಗುಣಮಟ್ಟ ನೋಡಿದರೆ ಬಾಯಿ ಬಡಿದುಕೊಳ್ಳಬೇಕು. ಏನಂತೀರಿ?

ಇದನ್ನೂ ಓದಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X