ದ್ವಾರಕೀಶ್ ಹೊಸ ಚಿತ್ರದ ಹೆಸರು ಸಂಪತ್ ಕುಮಾರ್!
ಯಾವುದೇ ಕಾರಣಕ್ಕೂ 'ವಿಷ್ಣುವರ್ಧನ' ಶೀರ್ಷಿಕೆ ಕೈಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಕಡೆಗೂ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಂತಿದೆ. ವಿವಾದಾತ್ಮಕ ಶೀರ್ಷಿಕೆ 'ವಿಷ್ಣುವರ್ಧನ' (ಪ್ರೊಡಕ್ಷನ್ ನಂಬರ್ 47) ಬದಲಾಯಿಸಲು ದ್ವಾರ್ಕಿ ಮುಂದಾಗಿದ್ದಾರೆ ಎಂಬ ಗುಮಾನಿ ಕನ್ನಡ ಚಿತ್ರೋದ್ಯಮದಲ್ಲಿ ದಟ್ಟವಾಗಿ ಹಬ್ಬಿದೆ. ಸುದೀಪ್, ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ.
ಈಗಾಗಲೆ ಚಲನಚಿತ್ರ ವಾಣಿಜ್ಯ ಮಂಡಳಿಗೆ 'ಸಂಪತ್ ಕುಮಾರ್' ಎಂಬ ಶೀರ್ಷಿಕೆಗಾಗಿ ದ್ವಾರಕೀಶ್ ಅರ್ಜಿ ಸಲ್ಲಿಸಿದ್ದಾರೆ. 'ವಿಷ್ಣುವರ್ಧನ' ಚಿತ್ರಕ್ಕೂ 'ಸಂಪತ್ ಕುಮಾರ್' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪದಿಸಿದ್ದಾರೆ. ಅದೇ ಬೇರೆ ಚಿತ್ರ, ಇದೇ ಬೇರೆ ಚಿತ್ರ ಎಂದು ದ್ವಾರ್ಕಿ ವಿವರ ನೀಡಿದ್ದಾರೆ. ಏತನ್ಮಧ್ಯೆ 'ವಿಷ್ಣುವರ್ಧನ' ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ದ್ವಾರ್ಕಿ ಮತ್ತೆ ಗುಡುಗಿದ್ದಾರೆ.
ಅಳಿಯ ಅಲ್ಲ ಮಗಳ ಗಂಡ ಎಂಬಂತೆ 'ವಿಷ್ಣುವರ್ಧನ' ಚಿತ್ರಕ್ಕೆ ಹೊಸದಾಗಿ 'ಸಂಪತ್ ಕುಮಾರ್' ಎಂದು ನಾಮಕರಣ ಮಾಡುವ ತಂತ್ರವೇ ಇದು ಎಂಬ ಅನುಮಾನ ಕನ್ನಡ ಚಿತ್ರರಂಗದಲ್ಲಿ ತಲೆ ಎತ್ತಿದೆ. ಒಂದು ವೇಳೆ ವಿಷ್ಣುವರ್ಧನ ಶೀರ್ಷಿಕೆ ಸಿಗದಿದ್ದರೆ 'ರಾಜಾ ವಿಷ್ಣುವರ್ಧನ' ಎಂದು ತಮ್ಮ ಚಿತ್ರಕ್ಕೆ ಹೆಸರಿಡುವುದಾಗಿ ದ್ವಾರ್ಕಿ ಹೇಳಿದ್ದಾರೆ.
'ವಿಷ್ಣುವರ್ಧನ' ಚಿತ್ರದ ಬಳಿಕ 'ಸಂಪತ್ ಕುಮಾರ್' ಚಿತ್ರ ಸೆಟ್ಟೇರಲಿದೆಯಂತೆ. ಅಂದಹಾಗೆ ಸಾಹಸಸಿಂಹ ವಿಷ್ಣುವರ್ಧನ ಅವರ ನಿಜ ನಾಮಧೇಯ ಸಂಪತ್ ಕುಮಾರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಚಿತ್ರಕ್ಕೆ 'ವಿಷ್ಣುವರ್ಧನ' ಎಂದು ಶೀರ್ಷಿಕೆ ಇಟ್ಟಾಗ ವಿಷ್ಣು ಅಭಿಮಾನಿಗಳು ಸೇರಿದಂತೆ ಭಾರತಿ ವಿಷ್ಣುವರ್ಧನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ನಟ ಅಭಿಜಿತ್ ಈಗಾಗಲೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ವಿಷ್ಣು' ಎಂಬ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದರು. ಹಾಗಾಗಿ 'ವಿಷ್ಣುವರ್ಧನ' ಶೀರ್ಷಿಕೆ ವಾಣಿಜ್ಯ ಮಂಡಳಿಯಲ್ಲಿ ತಿರಸ್ಕೃತವಾಗಿತ್ತು. ವಿಷ್ಣುವರ್ಧನ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ದ್ವಾರ್ಕಿ ಅವರಿಗೆ ನೀಡಬಾರದು ಎಂದು ಭಾರತಿ ವಿಷ್ಣುವರ್ಧನ್ ಅವರು ಮಂಡಳಿಯನ್ನು ವಿನಂತಿಸಿಕೊಂಡಿದ್ದಾರೆ.


Click it and Unblock the Notifications











