ಆರ್ ಎನ್ ಸುದರ್ಶನ್ ದಂಪತಿಗಳೊಂದಿಗೆ ಸಂಧ್ಯಾರಾಗ

ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ವಿಶಿಷ್ಟ, ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'. ಈ ಕಾರ್ಯಕ್ರಮದಲ್ಲಿ ಈ ಬಾರಿ ಆರ್ ಎನ್ ಸುದರ್ಶನ್ ದಂಪತಿಗಳೊಂದಿಗೆ ಚುರುಮುರಿ ತಿನ್ನುತ್ತಾ ಮಾತನಾಡಬಹುದು. ಅವರ ಸಾಧನೆಯ ಹಾದಿ, ನಡೆದು ಬಂದ ದಾರಿಯನ್ನು ಕಣ್ಣಾರೆ ಕಾಣಬಹುದು.
ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆಯಿಂದ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಒಂಚೂರು ಬೇಗ ಬಂದರೆ ಪ್ರಿಯದರ್ಶಿನಿ ಸಭಾಂಗಣದಲ್ಲಿ ಸೀಟು ಸಿಗುತ್ತದೆ. ಇಲ್ಲದಿದ್ದರೆ ಕಾರ್ಯಕ್ರಮವನ್ನು ಒಂಟಿ ಕಾಲಿನಲ್ಲಿ ನಿಂತೇ ನೋಡಬೇಕಾಗುತ್ತದೆ!
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಆರ್ ನಾಗೇಂದ್ರ ರಾವ್ ಅವರ ಪುತ್ರ ಆರ್ ಎನ್ ಸುದರ್ಶನ್. 'ವಿಜಯನಗರದ ವೀರಪುತ್ರ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿ ಇಟ್ಟ ಸುದರ್ಶನ್ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಗನಸಖಿಯಾಗಿದ್ದ ಸುದರ್ಶನ್ ಅವರ ಪತ್ನಿ ಶೈಲಶ್ರೀ ಅವರು 'ಸಂಧ್ಯಾ ರಾಗ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಅಡಿಯಿಟ್ಟರು.
ಸುದರ್ಶನ್ ನಿರ್ಮಿಸಿದ್ದ 'ನಗುವ ಹೂವು' ಚಿತ್ರದಲ್ಲಿ ಅವರ ಪತ್ನಿ ಶೈಲಶ್ರೀ ನಾಯಕಿಯಾಗಿ ಅಭಿನಯಿಸಿದ್ದರು. 'ತಂದೆ ಮಕ್ಕಳು', 'ಕಾಡಿನ ರಹಸ್ಯ' ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ಸುದರ್ಶನ್ ಅಭಿನಯಿಸಿದ್ದಾರೆ. ರಂಗ ಕಲಾವಿದರೂ ಆಗಿದ್ದ ಈ ದಂಪತಿಗಳು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಇತ್ತೀಚೆಗೆ ತೆರೆಕಂಡ 'ಸೂಪರ್' ಚಿತ್ರದಲ್ಲಿ ಉಪೇಂದ್ರ ಅವರ ತಂದೆಯಾಗಿ ಸುದರ್ಶನ್ ಅಭಿನಯಿಸಿದ್ದಾರೆ.


Click it and Unblock the Notifications











