ವಿಷ್ಣು ಕೊರಳಲ್ಲಿನ ರುದ್ರಾಕ್ಷಿ ಮಾಲೆಯ ಮರ್ಮ!
ನವರತ್ನಗಳ ಮಾಲೆಯನ್ನು ನಾನು ಸದಾ ಧರಿಸುತ್ತೇನೆ ಎಂದು ಈ ಹಿಂದೆ ಸಾಹಸ ಸಿಂಹ ವಿಷ್ಣುವರ್ಧನ್ ಹೇಳಿದ್ದರು. ಚಿತ್ರೀಕರಣ ಹೊರತುಪಡಿಸಿ ಮಿಕ್ಕೆಲ್ಲಾ ಸಭೆ, ಸಮಾರಂಭ, ಸಿನಿಮಾ ಕಾರ್ಯಕ್ರಮಗಳಲ್ಲಿ ಒಂಬತ್ತು ವಿಧದ ಹರಳುಗಳ ನವರತ್ನ ಮಾಲೆ ಸದಾ ಅವರ ಕೊರಳಲ್ಲಿ ರಾರಾಜಿಸುತ್ತಿತ್ತು. ಈಗ ವಿಷ್ಣು ಕೊರಳನ್ನು ರುದ್ರಾಕ್ಷಿ ಮಾಲೆ ಅಲಂಕರಿಸಿದೆ!
ನಮ್ಮ ಗುರುಗಳ ಸೂಚನೆಯ ಮೇರೆಗೆ ರುದ್ರಾಕ್ಷಿ ಮಾಲೆಯನ್ನು ತೊಟ್ಟಿದ್ದೇವೆಯೇ ವಿನಃ ಅಲಂಕಾರಕ್ಕಾಗಿ ಅಲ್ಲ ಎಂದರು ವಿಷ್ಣು. ನವರತ್ನ ಮಾಲೆ ಮತ್ತು ರುದ್ರಾಕ್ಷಿ ಮಾಲೆ ಇವೆರಡೂ ಧಾರ್ಮಿಕ ಸಂಕೇತಗಳು. ಯಾವುದೇ ಅದೃಷ್ಟವನ್ನು ಬೆನ್ನತ್ತಿ ಇದನ್ನು ತೊಟ್ಟಿಲ್ಲ. ಇದೊಂದು ವಿರಕ್ತ ಭಾವದ ಸಂಕೇತ ಅಷ್ಟೇ. ಧರ್ಮಶ್ರದ್ಧೆ ಸಹ ಒಂದು ಅಲಂಕಾರದಂತೆ ಎನ್ನುತ್ತಾರೆ ವಿಷ್ಣು.
ಅಲಂಕಾರಕ್ಕಾಗಲಿ, ಅಧ್ಯಾತ್ಮಿಕ ಭಾವನೆಗಾಗಲಿ ಇದನ್ನು ತೊಟ್ಟಿಲ್ಲ.ನಮ್ಮ ಗುರುಗಳ ಸೂಚನೆಯನ್ನು ಪಾಲಿಸಿದ್ದೇನೆ ಅಷ್ಟೇ ಎಂದರು. ಮಾಲೆಯಲ್ಲಿನ ಒಂದು ರುದ್ರಾಕ್ಷಿಗೆ ಬಂಗಾರದ ಕವಚವನ್ನು ತೊಡಿಸಲಾಗಿದೆ. ರುದ್ರಾಕ್ಷಿಯಲ್ಲಿನ ಶಕ್ತಿ ಅಲ್ಲೇ ಉಳಿಯಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ವಿಷ್ಣು ವಿವರ ನೀಡಿದರು.
ಅಲಂಕಾರ ಅಥವಾ ಅಧ್ಯಾತ್ಮಕ್ಕಿಂತಲೂ ಹೆಚ್ಚಿನ ಗೌರವನ್ನು ತಮ್ಮ ಕೈ ಕಡಗಕ್ಕೆ ವಿಷ್ಣು ನೀಡುತ್ತಾರೆ. 'ಸಾಹಸ ಸಿಂಹ' ಚಿತ್ರೀಕರಣ ವೇಳೆ ಅಭಿಮಾನಿಯೊಬ್ಬ ಕೊಟ್ಟ ಸ್ಟೀಲ್ ಕೈಕಡಗವನ್ನು ವಿಷ್ಣು ಇಂದಿಗೂ ತೊಡುತ್ತಿದ್ದಾರೆ. ಸ್ಟೀಲ್ ಕೈಕಡಗವನ್ನು ತಮ್ಮ ಚಿತ್ರಗಳಲ್ಲಿ ತೋರಿಸುವ ಮೂಲಕ ವಿಷ್ಣು ತಮ್ಮದೇ ಆದ ವಿಚಿತ್ರ ಶೈಲಿಗೆ ಹೆಸರಾಗಿರುವುದು ಗೊತ್ತೇ ಇದೆ!
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











