ಗೋಲ್ಡನ್ ಸ್ಟಾರ್ ಗಣೇಶ್ ಲುಕ್ ಬದಲಾಗಿದೆ!

ಗಣೇಶ್ ತಮ್ಮ ಮೈಭಾರ ಇಳಿಸಿಕೊಳ್ಳಲು ಎರಡು ತಿಂಗಳ ಕಾಲ ಅನ್ನ ತಿನ್ನುವುದನ್ನು ಬಿಟ್ಟಿದ್ದರಂತೆ. ಏನಿದ್ದರೂ ಹಣ್ಣು ಹಂಪಲು, ತೃಣ ಧಾನ್ಯಗಳನ್ನು ನೆಚ್ಚಿಕೊಂಡಿದ್ದರು. ಜೂನ್ 18ರಿಂದ ಮಳೆಯಲಿ ಜೊತೆಯಲಿ ಚಿತ್ರ ಸೆಟ್ಟೇರಲಿದೆ. ಇದು ಗಣೇಶ್ ರ ಇಪ್ಪತ್ತೈದನೇ ಚಿತ್ರ ಹಾಗೂ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಗಣೇಶ್ ನಿರ್ಮಿಸುತ್ತಿರುವ ಮೊದಲ ಚಿತ್ರ ಎಂಬುದು ವಿಶೇಷ.
'ಸರ್ಕಸ್ 'ಚಿತ್ರದ ಬಳಿಕ ಗಣೇಶ್ ಎರಡು ತಿಂಗಳು ವಿರಮಿಸಿಕೊಂಡಿದ್ದರು. ''ಮನೆಯಿಂದ ಹೊರಗೆ ಹೆಜ್ಜೆ ಇಡಬೇಡ. ನಿನಗೆ ದೊಡ್ಡ ಗಡಾಂತರ ಕಾದಿದೆ'' ಎಂದು ಜ್ಯೋತಿಷಿಯೊಬ್ಬರು ಎಚ್ಚರಿಸಿದ್ದ ಕಾರಣ ಗಣೇಶ್ ತಮ್ಮ ಎಲ್ಲ ಚಿತ್ರಗಳನ್ನು ಮುಂದೂಡಿದ್ದರು. ಮಾರ್ಚ್ 27ರಿಂದ ಮೇ 27ರ ತನಕ ಗಣೇಶ್ ಅಜ್ಞಾತವಾಸ ಮುಗಿಸಿದ್ದಾರೆ.
ಮಳೆಯಲಿ ಜೊತೆಯಲಿ ಚಿತ್ರಕ್ಕಾಗಿ ಗಣೇಶ್ ಸಾಕಷ್ಟು ಜಾಗ್ರತೆ ವಹಿಸಿದ್ದಾರೆ. ಕತೆ, ಚಿತ್ರಕತೆ ಮತ್ತು ನಿರ್ದೇಶನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಮತ್ತೊಂದು ಮುಂಗಾರು ಮಳೆ ಕನಸಿನಲ್ಲಿ ನಿರ್ದೇಶಕ ಪ್ರೀತಂ ಗುಬ್ಬಿ, ಸಂಕಲನಕಾರ ದೀಪು ಮತ್ತು ಛಾಯಾಗ್ರಾಹಕ ಕೃಷ್ಣ ನಿರತರಾಗಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











