ಜಾಕಿ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಕಣ್ಣೀರಧಾರೆ
ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಚಿತ್ರ 'ಜಾಕಿ' ಶತದಿನೋತ್ಸವ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಮಂಗಳವಾರ (ಫೆ. 8) ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ತನ್ನ ತಂದೆ ಡಾ. ರಾಜಕುಮಾರ್ ನೆನಸಿಕೊಂಡು ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತರು.
'ಜಾಕಿ' ಶತದಿನೋತ್ಸವ ಆಚರಿಸಿದ ಸಂದರ್ಭದಲ್ಲಿ ಚಿತ್ರತಂಡ ಕಾರ್ಯಕ್ರಮ ಆಯೋಜಿಸಿ ಶಿವರಾಜ್ ಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಿತು. ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ತಂದೆ ಕಾರಣ. ಅವರ ಹೆಸರು, ಪ್ರೀತಿ, ಸಿನಿಮಾದಲ್ಲಿ ಅವರು ತೋರಿಸುತ್ತಿದ್ದ ಶ್ರದ್ಧೆ ನನ್ನನ್ನು ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ ಎನ್ನುತ್ತಲೇ ಭಾವೊದ್ವೇಗಕ್ಕೊಳಗಾಗಿ ಕಣ್ಣೀರಿಟ್ಟರು.
ವೇದಿಕೆಯಲ್ಲಿ ಅದೇ ಗುಂಗಿನಲ್ಲಿದ್ದ ಶಿವಣ್ಣ ನಂತರ ಕೆಳಗಿಳಿದು ತಾಯಿ ಪಾರ್ವತಮ್ಮ ಮತ್ತು ಅಜ್ಜಿಯನ್ನು ಅಪ್ಪಿಕೊಂಡು ಮತ್ತೆ ಅಳಲಾರಂಭಿಸಿದರು. ಕೂಡಲೇ ನಿರ್ದೇಶಕ ಭಾರ್ಗವ ಶಿವಣ್ಣ ಬಳಿ ತೆರಳಿ ಅವರನ್ನು ಸಮಾಧಾನ ಪಡಿಸಿದರು. ಕಿಕ್ಕಿರಿದು ತುಂಬಿದ್ದ ಸಂಭಾಂಗಣ ಈ ಅನೀರಿಕ್ಷಿತ ಘಟನೆಯಿಂದ ಒಂದು ಕ್ಷಣ ಅವಕ್ಕಾಯಿತು.
ರಾಜ್ ಕುಟುಂಬದ ಬಹುತೇಕ ಸದಸ್ಯರು, ಯೋಗರಾಜ್ ಭಟ್, ಸೂರಿ, ನಾಯಕಿ ಭಾವನಾ, ಸಂಗೀತ ನಿರ್ದೇಶಕ ಹರಿಕೃಷ್ಣ, ಶ್ರೀನಾಥ್, ಜಯಂತಿ, ಬಸಂತ್ ಕುಮಾರ್ ಪಾಟೀಲ್, ರಾಕ್ಲೈನ್ ವೆಂಕಟೇಶ್, ಬರಗೂರು ರಾಮಚಂದ್ರ, ಸಾ ರಾ ಗೋವಿಂದು, ಅಶೋಕ್, ರಮೇಶ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Click it and Unblock the Notifications











