ಮೃತ ರೈತ ಕುಟುಂಬಕ್ಕೆ ದುನಿಯಾ ವಿಜಯ್ ನೆರವಿನ ಹಸ್ತ
ನಟ ದುನಿಯಾ ವಿಜಯ್ ಮತ್ತೊಮ್ಮೆ ಮಾನವೀಯತೆ ಮೆರೆದ ಘಟನೆಯಿದು. ಈ ಹಿಂದೆ ಅವರು ದಂಡ ಕಟ್ಟಲು ಪರದಾಡುತ್ತಿದ್ದ ಜೈಲು ಹಕ್ಕಿಗಳಿಗೆ ಸಹಾಯ ಮಾಡಿ ಸ್ವತಂತ್ರವಾಗಿ ಹಾರಾಡುವಂತೆ ಮಾಡಿದ್ದರು. ಈಗ ಆತ್ಮಹತ್ಯೆಗೆ ಶರಣಾಗಿದ್ದ ಬೀದರ್ನ ರೈತ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಬೀದರ್ ಜಿಲ್ಲೆಯ ಚಿಂತಲಗೇರಾ ಗ್ರಾಮದ ರೈತ ಸಿದ್ದಪ್ಪ ಮಾಳಗೆ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ. ಸಿದ್ದಪ್ಪನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮಗಳ ಮದುವೆ ಬೇರೆ ಸಮೀಪಿಸುತ್ತಿದ್ದರಿಂದ ಸಿದ್ದಪ್ಪನ ಪತ್ನಿ ಬಕ್ಕಮ್ಮನಿಗೆ ದಿಕ್ಕುತೋಚದಂತಾಗಿತ್ತು. ಇದನ್ನು ಅರಿತ ದುನಿಯಾ ವಿಜಯ್ ಸಂಕಷ್ಟದಲ್ಲಿದ್ದ ರೈತ ಕುಟುಂಬಕ್ಕೆ ರು.50,000 ಧನ ಸಹಾಯ ಮಾಡಿದ್ದಾರೆ.
ಸದ್ಯಕ್ಕೆ ಬೀದರ್ನ ಇತಿಹಾಸ ಪ್ರಸಿದ್ಧ ಕೋಟೆಯಲ್ಲಿ 'ಜರಾಸಂಧ' ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿನ ರೈತರು ಯಾರಾದರೂ ಆತ್ಮಹತ್ಯೆಗೆ ಶರಣಾಗಿದ್ದರೆ ತಿಳಿಸಿ ಅವರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಖುದ್ದಾಗಿ ದುನಿಯಾ ವಿಜಯ್ ಹೇಳಿದ್ದರು. ಆಗ ಸಿದ್ದಪ್ಪನ ಕುಟುಂಬ ಸಂಕಷ್ಟದಲ್ಲಿರುವ ವಿಚಾರ ತಿಳಿದು ಆರ್ಥಿಕ ಸಹಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ನಾಯಕಿ ಪ್ರಣೀತಾ, ನಿರ್ದೇಶಕ ಶಶಾಂಕ್ ಸೇರಿದಂತೆ ಚಿತ್ರತಂಡದ ಹಲವರು ಉಪಸ್ಥಿತರಿದ್ದರು. ವಿಜಯ್ ಕೈಯಾರೆ ಹಣ ತೆಗೆದುಕೊಂಡ ಬಕ್ಕಮ್ಮ, ಮಗಳ ಮದುವೆ ಹಂತದಲ್ಲಿ ಆರ್ಥಿಕ ಸಹಾಯ ಮಾಡುವ ಮೂಲಕ ನಮ್ಮ ಕುಟುಂಬಕ್ಕೆ ತೀರಿಸಲಾಗದ ಋಣ ಮಾಡಿದ್ದಾರೆ ಎಂದರು. ಬಳಿಕ ತಮ್ಮ ಮಗಳ ಮದುವೆಗೆ ವಿಜಯ್ ಅವರನ್ನು ಆಹ್ವಾನಿಸಿದರು.


Click it and Unblock the Notifications











