ನನ್ನ ಗೋಪಾಲ ಚಿತ್ರದಲ್ಲಿ ಮೋಟಮ್ಮ
ರಾಷ್ಟ್ರಕವಿ ಕುವೆಂಪು ಅವರ ಮಕ್ಕಳ ನಾಟಕ 'ನನ್ನ ಗೋಪಾಲ' ಚಲನಚಿತ್ರವಾಗಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಸಾವನದುರ್ಗದ ಶ್ರೀಲಕ್ಷ್ಮೀನರಸಿಂಹಸ್ವಾಮಿಯ ದೇಗುಲದಲ್ಲಿ ಖ್ಯಾತ ಸಾಹಿತಿ ಡಾ.ದೇಜಗೌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು ಹಾಗೂ ಒಂದು ಪಾತ್ರ ನಿರ್ವಹಣೆ ಕೂಡ ಮಾಡಿದರು. ಮಾಜಿ ಸಚಿವ ಎಂ.ಚಂದ್ರಶೇಖರ್ ಆರಂಭ ಫಲಕ ತೋರಿದರು.
ಸಿ.ಲಕ್ಷ್ಮಣ್ ನಿರ್ದೇಶನದ ಈ ಚಿತ್ರಕ್ಕೆ ಬಸವರಾಜ್ ಅವರ ಛಾಯಾಗ್ರಹಣವಿದೆ. ಎಂ.ಎಸ್.ಮಾರುತಿ ಸಂಗೀತ ನೀಡುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜೇಶ್, ಶೃತಿ, ಅನಿಲ್ಕುಮಾರ್, ದೊಡ್ಡರಂಗೇಗೌಡ, ಮೋಟಮ್ಮ, ಡಿ.ಬಿ.ಚಂದ್ರೇಗೌಡ, ಡಿ.ವಿ.ರಾಜರಾಂ, ಶ್ರೀನಾಥ ಮೈಲಾರಪ್ಪ ಹಾಗೂ 22 ಜನ ಬಾಲ ಕಲಾವಿದರು ಅಭಿನಯಿಸುತ್ತಿದ್ದಾರೆ. ಸಾವನದುರ್ಗದ ಸುತ್ತಮುತ್ತ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಕುವೆಂಪು ಅವರ ನನ್ನ ಗೋಪಾಲ ಮಕ್ಕಳ ನಾಟಕ ವಿವಿಧ ಸ್ಥಳಗಳಲ್ಲಿ ಇದುವರೆಗೂ ಒಟ್ಟು 361 ಪ್ರದರ್ಶನಗಳನ್ನು ಕಂಡಿದೆ. 'ಮಸಣದ ಮಕ್ಕಳು' ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿದ್ದ ಸಿ ಲಕ್ಷ್ಮಣ್ ಇದೀಗ ನನ್ನ ಗೋಪಾಲ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿ ಕುವೆಂಪು ಅವರನ್ನು ಭೇಟಿ ಮಾಡಿದ ದಿನಗಳನ್ನು ರಾಜೇಶ್ ನೆನೆಯುತ್ತಾ, ಅವರ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಹಿರಿಯ ನಟ ರಾಜೇಶ್ ತಿಳಿಸಿದ್ದಾರೆ.


Click it and Unblock the Notifications











