ಬೆಳ್ಳಿತೆರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೀವನ ಚೈತ್ರ
ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಚಿತ್ರದ ಕಥಾ ನಾಯಕ ಶ್ರೀಮಾನ್ ಬಿ ಎಸ್ ಯಡಿಯೂರಪ್ಪ. ಆದರೆ ಚಿತ್ರದ ನಾಯಕ ನಟ ಮಾತ್ರ ಯಾರು ಎಂಬುದನ್ನು ಇನ್ನೂ ಅಂತಿಮವಾಗಿಲ್ಲ. ಆಕ್ಷನ್, ಕಟ್ ಹೇಳುವವರು ಎಸ್ ವಿ ರಾಜೇಂದ್ರ ಸಿಂಗ್ ಬಾಬು.
ಯಡಿಯೂರಪ್ಪ ಅವರ ರಾಜಕೀಯ ಜೀವನದ ಏಳುಬೀಳುಗಳು, ಬದುಕಿನ ಸಾಧಕ ಬಾಧಕಗಳನ್ನು ತೆರೆಗೆ ತರಲು ಹೊರಟಿದ್ದಾರೆ ರೇಣುಕಾಚಾರ್ಯ. ಈ ಮೂಲಕವಾದರೂ ಯಡಿಯೂರಪ್ಪನವರಿಗೆ ತಮ್ಮ ಕಿರು ಕಾಣಿಕೆಯನ್ನು ಸಲ್ಲಿಸುವ ತವಕ ತಲ್ಲಣ ಅವರದು.
ಇತ್ತೀಚೆಗೆ ಸಿಂಗ್ ಬಾಬು ಅವರನ್ನು ಭೇಟಿ ಮಾಡಿದ ರೇಣುಕಾಚಾರ್ಯ, ಈ ವಿಷಯವನ್ನು ಅವರಿಗೆ ತಿಳಿಸಿದ್ದಾರೆ.ಇದರಿಂದ ಥ್ರಿಲ್ ಆದ ಬಾಬು ಈ ಪ್ರಾಜೆಕ್ಟ್ ತಮಗೆ ಸಿಕ್ಕಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಚಿತ್ರದ ರೂಪರೇಷಗಳು ಇನ್ನಷ್ಟೆ ಸಿದ್ಧಗೊಳ್ಳಬೇಕು.
ಕತೆ,ಕಾದಂಬರಿಯನ್ನು ಚಿತ್ರವಾಗಿಸುವುದು ಸುಲಭ. ಆದರೆ ವ್ಯಕ್ತಿಯೊಬ್ಬರ ಜೀವನ ಚರಿತ್ರೆಯನ್ನು ತೆರೆಗೆ ತರುವುದು ತುಂಬಾ ಕಷ್ಟ ಎನ್ನುತ್ತಾರೆ ಸಿಂಗ್ ಬಾಬು. ಯಡಿಯೂರಪ್ಪನವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬೂಕನಕೆರೆ ಸೇರಿದಂತೆ ಶಿಕಾರಿಪುರ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಆದರೆ ಚಿತ್ರದ ನಾಯಕ ನಟ ಯಾರು ಎಂಬುದೇ ಸದ್ಯದ ಕುತೂಹಲ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











