ತ್ರಿವೇಣಿಗೆ ಬರಲಿದೆ ದಶಮುಖ: ಇಂದ್ರಜಿತ್ ಕಂಗಾಲು
ಇಂದ್ರಜಿತ್ ಲಂಕೇಶ್ ನಿರ್ದೇಶನ, ದಿಗಂತ್-ಚಾರ್ಮಿ ಜೋಡಿಯ 'ದೇವ್ ಸನ್ ಆಫ್ ಮುದ್ದೇ ಗೌಡ' ಚಿತ್ರವು ಈ ವಾರ ಮುಖ್ಯ ಚಿತ್ರಮಂದಿರ ತ್ರಿವೇಣಿಯಿಂದ ಎತ್ತಂಗಡಿಯಾಗಲಿದೆ. ನಂತರ ಸ್ವಪ್ನ ಚಿತ್ರಮಂದಿರದಲ್ಲಿ ಈ ಚಿತ್ರದ ಪ್ರದರ್ಶನ ಮುಂದುವರಿಯಲಿದೆ ಎಂಬ ಮಾಹಿತಿ ಗಾಂಧಿನಗರದಿಂದ ಬಂದಿದೆ. ತ್ರಿವೇಣಿಯಲ್ಲಿ 'ದಶಮುಖ' ಬಿಡುಗಡೆಯಾಗಲಿದೆ. ಪಕ್ಕದಲ್ಲಿ ಪ್ರದರ್ಶನವಾಗುತ್ತಿರುವ ತೆಲುಗು ಚಿತ್ರ 'ರಚ್ಚಾ' ಹಾಗೇ ಮುಂದುವರಿಯಲಿದೆ.
ಈ ವಿಷಯದಿಂದ ಇಂದ್ರಜಿತ್ ಲಂಕೇಶ್ ಭಾರೀ ಕಂಗಾಲಾಗಿದ್ದಾರೆ. ಒಂದೇ ವಾರಕ್ಕೆ ತಮ್ಮ ಚಿತ್ರ ಗಾಂಧಿನಗರದ ಮುಖ್ಯ ಚಿತ್ರಮಂದಿರದಿಂದ ಎತ್ತಂಗಡಿಯಾದರೆ ಹೇಗೆ ಎಂಬುದು ಅವರ ಚಿಂತೆಗೆ ಕಾರಣ. ಬೇರೆ ಥಿಯೇಟರುಗಳಲ್ಲಿ ದೇವ್ ಸನ್ ಆಫ್ ಮುದ್ದೇ ಗೌಡ ಚಿತ್ರದ ಪ್ರದರ್ಶನ ಮುಂದುವರಿಯಲಿದೆ. ಆದರೆ ಮುಖ್ಯ ಚಿತ್ರಮಂದಿರದಿಂದ ಕಿತ್ತುಹಾಕಿದರೆ ಹೇಗೆ ಎಂಬುದು ಅವರ ಪ್ರಶ್ನೆ, ತಮಗೆ ಅನ್ಯಾಯವಾಗಿದೆ ಎಂಬುದು ಅವರ ಅಳಲು.
ಈಗ ಪ್ರದರ್ಶನ ಕಾಣುತ್ತಿರುವ ರಚ್ಚಾ ಮತ್ತು ಭೀಮಾತೀರದಲ್ಲಿ ಚಿತ್ರಗಳಿಗೆ ಹೋಲಿಸಿದರೆ ತಮ್ಮ ಚಿತ್ರ ಸ್ಲೋ ಪಿಕಪ್ ಆಗುತ್ತಿದೆ ಎಂಬುದನ್ನು ಅವರು ಒಪ್ಪಿಕೊಂಡರಾದರೂ ಶೇರ್ ಚೆನ್ನಾಗಿ ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಒಂಟಿ ಥಿಯೇಟರುಗಳಿಗಿಂತ ಚೆನ್ನಾಗಿ ಓಡುತ್ತಿದೆ ಎಂಬ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ ಇಂದ್ರಜಿತ್. ಬಹಳ ಬೇಸರದಲ್ಲಿರುವ ಇಂದ್ರಜಿತ್ ಮುಂದಿನ ನಡೆ ಏನು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











