ಮಾತಿನ ಮನೆಗೆ ನಂಜನಗೂಡು ನಂಜುಂಡ
'ಪ್ರಚಂಡ ರಾವಣ' ಎಂಬ ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ ಪ್ರಸಾದ್ ಅವರ ಮತ್ತೊಂದು ಚಿತ್ರ 'ನಂಜನಗೂಡು ನಂಜುಂಡ'. ಮಾನಸಿಕ ರೋಗಿಯೊಬ್ಬನ ಸುತ್ತ ಹೆಣೆಯಲಾದ ಈ ಚಿತ್ರಕ್ಕೆ ಮಲಯಾಳಂನ 'ಒಡಕ್ಕುನೋಕ್ಕಿ ಯಂದಿರಮ್ 'ಚಿತ್ರದ ಕಥೆಯೇ ಸ್ಪೂರ್ತಿ. ಈಗಿನ ಕಾಲಮಾನಕ್ಕೆ ತಕ್ಕಂತೆ, ಮೂಲ ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡು ಹಲವಾರು ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡು, ಅಚ್ಚುಕಟ್ಟಾಗಿ ಚಿತ್ರಕಥೆ ಮಾಡಿದ್ದಾರೆ, ನಿರ್ದೇಶಕ ಶ್ರೀನಿವಾಸ ಪ್ರಸಾದ್.
ಮೂಲ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳಿದ್ದಿಲ್ಲ. ನಮ್ಮ ಚಿತ್ರಕ್ಕೆ ಮನರಂಜನೆಗೆ ಬೇಕಾದ ಹಲವಾರು ಅಂಶಗಳನ್ನು ಅಳವಡಿಸಿಕೊಂಡು ಸೈಕಾಲಜಿ ಜೊತೆಗೆ ಹಾಸ್ಯವನ್ನು ಸೂಕ್ಷ್ಮವಾಗಿ ತೆಗೆದುಕೊಂಡು ಹೋಗಿದ್ದೇನೆ. ತನ್ನ ಹೆಂಡತಿ ಸುಂದರವಾಗಿರುವುದನ್ನೇ ಅನುಮಾನಿಸುವ ನಾಯಕ ಆಯ್ಕೆಯನ್ನು ಯಾರಾದರೂ ನೋಡಿದರೆ, ಮಾತನಾಡಿಸಿದರೆ, ಅನುಮಾನ ಪಡುತ್ತಾನೆ. ಈ ಅನುಮಾನ ಅತಿರೇಕಕ್ಕೆ ಹೋಗಿ ನೋಡುಗರಿಗೆ ಹೇಗೆ ಹಾಸ್ಯಾಸ್ಪದವಾಗುತ್ತದೆ ಎನ್ನುವುದೇ ಈ ಚಿತ್ರದ ಮುಖ್ಯ ಕಥಾವಸ್ತು ಎನ್ನುತ್ತಾರೆ ನಿರ್ದೇಶಕ ಪ್ರಸಾದ್.
ಹಿರಿಯ ನಟ- ನಿರ್ದೇಶಕ ಕೆಎಸ್ಎಲ್ ಸ್ವಾಮಿ ಹಾಗೂ ನಾಗರಾಜ್ ಕೋಟೆ ಪ್ರಮುಖ ಹಾಸ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುರೇಶ್ ಈ ಚಿತ್ರದ ಛಾಯಾಗ್ರಾಹಕರಾಗಿದ್ದು, ರವಿಚಂದ್ರ ಚಿತ್ರದ 6 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕನಾಗಿ ಹಾಸ್ಯನಟ ರವಿಶಂಕರ್ ಹಾಗೂ ನಾಯಕಿ ಪಾತ್ರದಲ್ಲಿ ಮಲಯಾಳಂ ನಟಿ ಹಂಸಿನಿ ನಟಿಸಿದ್ದು, ಫರ್ನಿಚರ್ ಉದ್ಯಮ ನಡೆಸುತ್ತಿರುವ ಸುಭಾಷ್ ಕೂರ್ಗ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ, ಚಿತ್ರೀಕರಣ ಸಂಪುರ್ಣಗೊಂಡು, ಚಿತ್ರದ ಎಡಿಟಿಂಗ್ ಕಾರ್ಯ ಭರದಿಂದ ನಡೆಯುತ್ತಿದೆ. ಬರುವ ವಾರದಿಂದ ಚಿತ್ರಕ್ಕೆ ಮಾತುಗಳ ಮರು ಲೇಪನ ಕಾರ್ಯ ಕೂಡಾ ಪ್ರಾರಂಭವಾಗಲಿದೆ.


Click it and Unblock the Notifications











