ನಟ ರಜನಿಕಾಂತ್ ಈಗ ಕನ್ನಡ ಕಾದಂಬರಿಯಲ್ಲಿ ಮಗ್ನ
ಸದಾ ಚಿತ್ರೀಕರಣ ಅದೂ ಇದೂ ಎಂದು ಬಿಜಿಯಾಗಿರುವ ಸಿನಿಮಾ ತಾರೆಗಳಲ್ಲಿ ಎಷ್ಟು ಮಂದಿಗೆ ಕಾದಂಬರಿ ಓದುವ ಹವ್ಯಾಸವಿದೆ. ಹುಡುಕಿದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಸಿಗಬಹುದು. ಅದರಲ್ಲಿ ನಟ ರಜನಿಕಾಂತ್ ಕೂಡ ಒಬ್ಬರು.ಅವರು ಈಗ ಕನ್ನಡ ಕಾದಂಬರಿಯೊಂದನ್ನು ಓದುತ್ತಿದ್ದಾರೆ. ಚಂದ್ರಶೇಖರ ಕಂಬಾರರ 'ಶಿಖರ ಸೂರ್ಯ'ದಲ್ಲಿ ಮಗ್ನರಾಗಿರುವ ರಜನಿ ಅವರಿಗೆ ಕಾದಂಬರಿಯಲ್ಲಿ ತುಂಬ ಹಿಡಿಸಿದೆಯಂತೆ.
ಈ ವಿಷಯವನ್ನು ಕಚಕಾತಂಕ (ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ, ಕಲಾವಿದರ)ಒಕ್ಕೂಟ ಅಧ್ಯಕ್ಷ ಹಾಗೂ ಹಿರಿಯ ನಟ ಅಶೋಕ್ ಇತ್ತೀಚೆಗೆ ಸುದ್ದಿಗಾರರಿಗೆ ತಿಳಿಸಿದರು. ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಶೋಕ್ ತಮ್ಮ ಹಾಗೂ ರಜನಿ ನಡುವಿನ ಸ್ನೇಹ ಸಂಬಂಧವನ್ನು ಹಂಚಿಕೊಂಡರು.
'ಸೂಪರ್' ಚಿತ್ರವನ್ನು ವೀಕ್ಷಿಸಲು ರಜನಿಕಾಂತ್ ಬೆಂಗಳೂರಿಗೆ ಬಂದಿದ್ದಾಗ ಅವರಿಗೆ ಕಂಬಾರರ 'ಶಿಖರ ಸೂರ್ಯ' ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಚೆನ್ನೈಗೆ ಹಿಂತಿರುಗಿದ ಬಳಿಕ ರಜನಿ ಪುಸ್ತಕವನ್ನು ಓದಲು ಕುಳಿತರಂತೆ. ಕೆಲವು ಪುಟಗಳನ್ನು ಓದುತ್ತಿದ್ದಂತೆ ಅವರಿಗೆ ಎಲ್ಲಿಲ್ಲದ ಆಸಕ್ತಿ ಬಂದಿದೆ.
ಕೂಡಲೆ ಅಶೋಕ್ ಅವರಿಗೆ ಕರೆ ಮಾಡಿ ತುಂಬಾ ಇಂಟರೆಸ್ಟಿಂಗ್ ಆಗಿದೆ ಎಂದಿದ್ದಾರೆ. ಒಂದು ಅದ್ಭುತ ಪುಸ್ತಕ ಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು ಎಂದಿದ್ದಾರೆ. ಪುಸ್ತಕವನ್ನು ತುಂಬಾ ನಿಧಾನವಾಗಿ ಓದುತ್ತಿದ್ದೇನೆ. ಅದರಲ್ಲಿನ ಪ್ರತಿ ಪದವನ್ನೂ ಆಸ್ವಾದಿಸುತ್ತಿದ್ದೇನೆ ಎಂದು ಅಶೋಕ್ ಅವರಿಗೆ ರಜನಿ ತಿಳಿಸಿದ್ದಾಗಿ ಹೇಳಿದ್ದಾರೆ.
ಇಷ್ಟಕ್ಕೂ ಶಿಖರ ಸೂರ್ಯ ಕಾದಂಬರಿಯಲ್ಲಿ ಏನಿದೆ? ಎಚ್ ಎಸ್ ಶಿವಪ್ರಕಾಶ್ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ. "ಇಲ್ಲಿದೆ ದೈವ ಸೃಷ್ಟಿಯ ವಿಪುಲತೆ - ಷೇಕ್ಸ್ಪಿಯರನ್ನು ಕುರಿತು ಡ್ರೈಡನ್ ಹೇಳಿದ ಮಾತು ಕಂಬಾರರ ಈ ವಿಪುಲ ಕೃತಿಗೂ ಅನ್ವಯಿಸುತ್ತದೆ. ಇಂದಿನ ಗೋಳೀಕೃತ (ಗ್ಲೋಬಲೈಸ್ಡ್) ಜಗತ್ತಿನ ಒಣಗತ್ತುಗಳನ್ನು, ತಂತ್ರಜ್ಞಾನದ ಠೇಂಕಾರಗಳನ್ನು, ಈ ಮೃತ್ಯುವಿನ ಸ್ಥಿತಿಯಲ್ಲಡಗಿರುವ ಮರುಹುಟ್ಟಿನ ಅಸೀಮ ಸಾಧ್ಯತೆಗಳನ್ನು ಇಷ್ಟು ಸಮಗ್ರವಾಗಿ ಹಿಡಿದಿಡುವ ಕೃತಿಗಳು ನನಗೆ ಗೊತ್ತಿದ್ದ ಮಟ್ಟಿಗೆ ಸಾಹಿತ್ಯದಲ್ಲಿ ವಿರಳ."


Click it and Unblock the Notifications











