ಯೋಗರಾಜ್ ಭಟ್ಟರ ಚಿತ್ರಕ್ಕೆ ಸಿಕ್ಕ ಹೊಸ ನಿಧಿ
ಯೋಗರಾಜ್ ಭಟ್ ಸ್ವಂತ ನಿರ್ಮಾಣದ ಚಿತ್ರಕ್ಕೆ ಹೊಸ ನಿಧಿ ಸಿಕ್ಕಂತಾಗಿದೆ. ಇನ್ನೂ ಹೆಸರಿಡದ ಭಟ್ಟರ ಚಿತ್ರಕ್ಕೆ ನಾಯಕಿಯಾಗಿ ನಿಧಿ ಸುಬ್ಬಯ್ಯ ಆಯ್ಕೆ ಯಾಗಿದ್ದಾರೆ. ಈ ಮುಂಚೆ ಭಟ್ಟರು ತಮ್ಮ ಮಹತ್ವಾಕಾಂಕ್ಷಿ ಚಿತ್ರಕ್ಕೆ ಹರಿಪ್ರಿಯಾರನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರಕತೆಯನ್ನು ಭಟ್ಟರು ತಿದ್ದುಪಡಿ ಮಾಡಿಕೊಂಡಿದ್ದು ಬದಲಾದ ಚಿತ್ರಕತೆಗೆ ತಕ್ಕಂತೆ ನಾಯಕಿಯನ್ನು ಭಟ್ಟರು ಬದಲಾಯಿಸಿದ್ದಾರೆ.
ಹೊಸ ಚಿತ್ರಕತೆಗೆ ಹರಿಪ್ರಿಯಾ ಹೊಂದುವುದಿಲ್ಲ. ಹಾಗಾಗಿ ನಿಧಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂಬುದು ಭಟ್ಟರು ಕೊಡುವ ವಿವರಣೆ.'ವರ' ಎಂಬ ಚಿತ್ರದ ಮೂಲಕ ನಿಧಿ ಸುಬ್ಬಯ್ಯ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕಳೆದ ವರ್ಷ ಕೋಮಲ್ ಜತೆ 'ಚಂಕಾಯ್ಸಿ ಚಿಂದಿ ಉಡಾಯ್ಸಿ'ದ್ದರು. ಬಿಡುಗಡೆಗಾಗಿ ಕಾಯುತ್ತಿರುವ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದಲ್ಲೂ ನಿಧಿ ಪಾತ್ರನಿರ್ವಹಣೆ ಮಾಡಿದ್ದಾರೆ.
ನಿಧಿ ಸುಬ್ಬಯ್ಯ ಅವರಿಗೆ ಜತೆಯಾಗಲಿರುವುದು ಗುಳಿಕೆನ್ನೆಯ ಹುಡುಗ ದಿಗಂತ್. ಚಿತ್ರದ ಶೀರ್ಷಿಕೆಯ ಹುಡುಕಾಟದಲ್ಲಿ ಸದ್ಯಕ್ಕೆ ಭಟ್ಟರು ಮುಳುಗಿದ್ದಾರೆ. ಯೋಗರಾಜ್ ಭಟ್, ದಿಗಂತ್ ಜೋಡಿ ಈಗಾಗಲೇ ಮೂರು ಚಿತ್ರಗಳೊಂದಿಗೆ ಕೆಲಸ ಮಾಡಿದ್ದಾರೆ. ಈ ಹಿಂದೆ ಇವರಿಬ್ಬರೂ 'ಮುಂಗಾರು ಮಳೆ', 'ಗಾಳಿಪಟ' ಮತ್ತು 'ಮನಸಾರೆ' ಚಿತ್ರಗಳನ್ನು ಮಾಡಿದ್ದರು.


Click it and Unblock the Notifications











