ಹೆಣ್ಣುಮಕ್ಕಳನ್ನು ಚುಡಾಯಿಸಿದರೆ ದಂಡಂ ದಶಗುಣಂ
ಚಿತ್ರದ ನಾಯಕ ನಿಷ್ಠಾವಂತ ಪೊಲೀಸ್ ಅಧಿಕಾರಿ. ದುಷ್ಟರನ್ನು ಕಂಡರೆ ಸ್ಥಳದಲ್ಲೆ ಮಟ್ಟ ಹಾಕುವ ಸ್ವಭಾವ ಆತನದು. ರಸ್ತೆಬದಿಯಲ್ಲಿ ನಿಂತಿದ್ದ ಕಿಡಿಗೇಡಿಗಳ ಗುಂಪಿನವರು ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿರುತ್ತಾರೆ ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಆ ಗುಂಪಿನವರಿಗೆ ತಕ್ಕ ಶಾಸ್ತಿ ಮಾಡಿ ಬುದ್ದಿ ಹೇಳುವ ಸನ್ನಿವೇಶವನ್ನು ನಗರದ ಎಚ್ಎಂಟಿ ಲೇಔಟ್ ರಸ್ತೆಯಲ್ಲಿ 'ದಂಡಂದಶಗುಣಂ ಚಿತ್ರಕ್ಕಾಗಿ ನಿರ್ದೇಶಕ ಕೆ.ಮಾದೇಶ್ ಚಿತ್ರಿಸಿಕೊಂಡರು.
ನಾಯಕ ಚಿರಂಜೀವಿಸರ್ಜಾ ಹಾಗೂ ಸಹ ಕಲಾವಿದರು ಅಭಿನಯಿಸಿದ ಈ ಸನ್ನಿವೇಶಕ್ಕೆ ಕೆ ಡಿ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ನಾಯಕಿಯದು ಚಿತ್ರದಲ್ಲಿ ಶಿಕ್ಷಕಿಯ ಪಾತ್ರ. ತುರ್ತು ಕೆಲಸದ ಮೇಲೆ ನಾಯಕಿ ರಂಗ ಮಂದಿರವೊಂದಕ್ಕೆ ತೆರಳಬೇಕಾಗಿರುತ್ತದೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ನಾಯಕ ನಾಯಕಿಯನ್ನು ರಂಗಮಂದಿರಕ್ಕೆ ಕರದೊಯ್ಯುವ ಸನ್ನಿವೇಶದ ಚಿತ್ರೀಕರಣ ಕೂಡ ಈ ಹಂತದಲ್ಲಿ ನಡೆದಿದೆ.
ಚಿರಂಜೀವಿ ಸರ್ಜಾ ಹಾಗೂ ರಮ್ಯಾ ಈ ಸನ್ನಿವೇಶದಲ್ಲಿ ಅಭಿನಯಿಸಿದ ಕಲಾವಿದರು. ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಮನೋಹರ್ ಛಾಯಾಗ್ರಹಣ, ಕೆ.ವಿ.ರಾಜು ಸಂಭಾಷಣೆ, ಶ್ಯಾಂ ಸಂಕಲನ ಮತ್ತು ಚಂಪಕಧಾಮಬಾಬು ರವರ ನಿರ್ಮಾಣ ನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ಚಿರಂಜೀವಿಸರ್ಜಾ, ರಮ್ಯಾ, ರವಿಶಂಕರ್, ತಿಲಕ್, ತಾರಕೇಶ್ಪಟೇಲ್, ರಮೇಶ್, ಗಜಲ್ಖಾನ್, ಲಕ್ಷ್ಮೀಹೆಗ್ಡೆ, ಸುನೀಲ್ ಮುಂತಾದವರಿದ್ದಾರೆ. ಓಂಶ್ರೀಚಾಮುಂಡೇಶ್ವರಿ ಫಿಲಂಸ್ ಲಾಂಛನದಲ್ಲಿ ಎ.ಗಣೇಶ್ ನಿರ್ಮಿಸುತ್ತಿರುವ ಚಿತ್ರವಿದು.


Click it and Unblock the Notifications











