ಸದ್ಯದಲ್ಲೇ'ವಾಯುಪುತ್ರ' ತೆರೆಗೆ ಆಗಮನ
ಕರುನಾಡ ಹೆಮ್ಮೆಯ ಪ್ರತಿಭೆ ಅರ್ಜುನ್ ಸರ್ಜಾ. ನೆರೆ ರಾಜ್ಯಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಜನಮನ್ನಣೆಗಳಿಸಿರುವ ಇವರು ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಹಂಬಲವಿತ್ತು. ಆ ಹಂಬಲವನ್ನು ಸಾಕಾರಗೊಳಿಸಿ 'ವಾಯುಪುತ್ರ' ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರಕ್ಕೆ ಮಂಗಳೂರು, ಮೈಸೂರು, ಪಾಂಡವಪುರ ಹಾಗೂ ದೂರದ ದುಬೈನಲ್ಲಿ 65 ದಿನಗಳ ಚಿತ್ರೀಕರಣ ನಡೆದಿದೆ. ಆಕಾಶ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪೂರ್ಣವಾದರೆ, ಅಶ್ವಿನಿ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ರೀರೆಕಾರ್ಡಿಂಗ್ ಸಂಪೂರ್ಣವಾಗಿದೆ. ಕೆಲವೇ ದಿನಗಳಲ್ಲಿ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಮುಂದಿನ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಅರ್ಜುನ್ ಸರ್ಜಾರ ಸಹೋದರ ಕಿಶೋರ್ ಸರ್ಜಾ ಈ ಚಿತ್ರದ ನಿರ್ದೇಶಕರು. ಚಿತ್ರದ ಚಿತ್ರೀಕರಣವನ್ನು ಸುಲಲಿತವಾಗಿ ಪೂರೈಸಿದ ನಿರ್ದೇಶಕರು ಬಿಡುಗಡೆಯ ಪೂರ್ವದಲ್ಲೇ ವಿದಿವಶರಾಗಿದ್ದು ವಿಷಾದನೀಯ.
ಶ್ರೀ ರಾಮ ಫಿಲಂಸ್ ಪ್ರೈ(ಲಿ) ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲಿಂಗುಸ್ವಾಮಿ ಕಥೆ ಬರೆದಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಕೆ.ಕೆ ಸಂಕಲನ, ಎಂ.ಎಸ್.ರಮೇಶ್, ಕಿಶೋರ್ ಸರ್ಜಾ ಸಂಭಾಷಣೆ, ತಾರಾ-ಪ್ರಸಾದ್, ಶೀಭಿ ಪೌಲ್ರಾಜ್, ಇಮ್ರಾನ್ ಸರ್ದಾರಿಯಾ, ದೇವ್ಸಂಪತ್ ನೃತ್ಯ, ಶಿವಾರ್ಜುನ್, ಸಿ.ಎಚ್.ರಾಮಕೃಷ್ಣ ನಿರ್ಮಾಣ ಮೇಲ್ವಿಚಾರಣೆಯಿದೆ.
ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಅಂಬರೀಶ್, ಅಂದ್ರಿತಾ ರೇ, ಅಜಯ್, ಸಾಧುಕೋಕಿಲಾ, ರಮೇಶ್ಭಟ್, ಮೈಕೋ ನಾಗರಾಜ್, ಕೃಷ್ಣೇಗೌಡ, ಪದ್ಮಜಾರಾವ್, ಶ್ರೀಶೈಲನ್, ಸರೋಜ ಶ್ರೀಶೈಲನ್, ರಮೇಶ್ ಪಂಡಿತ್, ನಾಗರಾಜ ಮೂರ್ತಿ, ಗಣೇಶ್, ಸಾಗರ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











