ರಾಡ್ ಶ್ಯಾಮನ ಕತೆ ಕೈಗೆತ್ತಿಕೊಂಡ ಎ ಎಂ ಆರ್ ರಮೇಶ್
ಇಷ್ಟು ದಿನ ನೈಜ ಕತೆಗಳ ಬೆನ್ನುಹತ್ತಿದ್ದ ನಿರ್ದೇಶಕ ಎ ಎಂ ಆರ್ ರಮೇಶ್ ಈಗ ಪಾತಕ ಲೋಕದ ಮೇಲೆ ಕಣ್ಣಾಕಿದ್ದಾರೆ. ಅವರು ನಿರ್ದೇಶಿಸಲಿರುವ ನೂತನ ಚಿತ್ರಕ್ಕೆ 'ರಮ್ಮಿ' ಎಂದು ಹೆಸರಿಡಲಾಗಿದೆ. ಆದರೆ ಇದು ಇಸ್ಪೀಟು ಆಟ ರಮ್ಮಿಗೂ ಚಿತ್ರಕತೆಗೂ ಎತ್ತಣಿಂದ ಎತ್ತಣದ ಸಂಬಂಧವೂ ಇಲ್ಲ.
ಅಂದಹಾಗೆ ಯಾರು ಈ ರಾಡ್ ಶ್ಯಾಮ? ಈತನೊಬ್ಬ ಸರಣಿ ಹಂತಕ. ಈವರೆಗೆ 33 ಕೊಲೆಗಳನ್ನು ಮಾಡಿದಾತ! ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ. ಇವನ ಜೀವನದಲ್ಲಿ ನಡೆದ ಕೆಲವು ಘಟನೆಗಳು ರೋಚಕವಾಗಿವೆಯಂತೆ. ಅವನು 33 ಕೊಲೆಗಳನ್ನು ಮಾಡಲು ಬಲವಾದ ಕಾರಣವೂ ಇದೆಯಂತೆ.
ಆ ಬಲವಾದ ಕಾರಣಗಳೇನು ಎಂಬುದನ್ನು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ರಮೇಶ್ ಪತ್ತೆಹಚ್ಚಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಹಲವಾರು ಬಾರಿ ಭೇಟಿ ನೀಡಿರುವ ರಮೇಶ್, ರಾಡ್ ಶ್ಯಾಮನನ್ನು ಮಾತನಾಡಿಸಿ ಅವನಿಂದ ಒಂದಷ್ಟು ವಿವರಗಳನ್ನು ಪಡೆದು ಚಿತ್ರಕತೆಯನ್ನು ಹೆಣೆದಿದ್ದಾರೆ. ಆದರೆ ಇದು ರೌಡಿಸಂ ಕುರಿತ ಚಿತ್ರವಲ್ಲ ಎಂದಿರುವ ರಮೇಶ್ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿಂದ ಕೂಡಿದ ಚಿತ್ರ ಎಂದಿದ್ದಾರೆ.
ಕತೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ರಮೇಶ್ ಹೊತ್ತಿರುವುದು ವಿಶೇಷ. ಈ ಚಿತ್ರಕ್ಕೆ ಇಂಧುಮತಿ ರಮೇಶ್ ನಿರ್ಮಾಪಕರು. ಚಿರಂಜೀವಿ ಸರ್ಜಾ ಅಥವಾ 'ಒಲವೇ ಮಂದಾರ' ಚಿತ್ರದ ನಾಯಕ ಶ್ರೀಕಾಂತ್ ಇಬ್ಬರಲ್ಲಿ ಒಬ್ಬರು ನಾಯಕನಾಗುವ ಸಾಧ್ಯತೆ ಇದೆ. ಶರ್ಮಿಳಾ ಮಾಂಡ್ರೆ ಚಿತ್ರದ ನಾಯಕಿ.
ಎಮಿಲ್ ಸಂಗೀತ ಸಂಯೋಜನೆ, ಮುರಳಿ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯಕ್ಕೆ ಪೋಷಕ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 'ರಮ್ಮಿ' ಚಿತ್ರ ಜನವರಿಯಲ್ಲಿ ಸೆಟ್ಟೇರಲಿದೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾಸ್ಯ, ಸೆಂಟಿಮೆಂಟ್ ಹಾಗೂ ನವಿರಾದ ಪ್ರೇಮವೂ ಚಿತ್ರದಲ್ಲಿರುತ್ತದೆ ಎಂದಿದ್ದಾರೆ ರಮೇಶ್.


Click it and Unblock the Notifications











