ಈ ವಾರ ಐದು ಕನ್ನಡ ಚಿತ್ರಗಳ ನಡುವೆ ಜಟಾಪಟಿ!
ಕಳೆದ ವಾರ ನಾಲ್ಕು ಚಿತ್ರಗಳು ತೆರೆಕಂಡಿದ್ದು ಚಿತ್ರಪ್ರೇಮಿಗಳಿಗೆ ಮತ್ತೊಂದು ಶಾಕಿಂಗ್ ಸುದ್ದಿ. ರಂಗಪ್ಪ ಹೋಗೇಬಿಟ್ಟ, ಕೋಟೆ ಒಡೆದೇ ಹೋಯಿತು, ಒನ್ಡೇ ಸೆಕೆಂಡ್ ಡೇಗೇ ಎತ್ತಂಗಡಿಯಾಯಿತು, ಸೂಸೈಡ್ ನೋಡಿ ಜನ ಮಾನಸಿಕವಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಒಂದಷ್ಟು ಜನ ಗಾಂಧೀನಗರ ಗಲ್ಲಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ!
ಇದೆಲ್ಲದರ ಮಧ್ಯೆ ಇನ್ನೊಂದು ಶಾಕಿಂಗ್ ನ್ಯೂಸ್ ಬಂದಿದೆ. ಅದೇನಪ್ಪ ಅಂದರೆ, ಈ ವಾರ ಐದು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿದೆ! ಒಂದು ಕಡೆ ಮಾಜಿ ಮಾಸ್ಟರ್ ಆನಂದ್ ನಿರ್ದೇಶನದ 'ಫೈವ್ ಈಡಿಯಟ್ಸ್ ' ಬರುತ್ತಿದೆ. ಇದು ಪಕ್ಕಾ ಕಾಮಿಡಿ ಚಿತ್ರ ಎನ್ನುತ್ತಾರೆ ಆನಂದ್. ಇದರಲ್ಲಿ ಜೇಡರಹಳ್ಳಿ ಕೃಷ್ಣಪ್ಪ ವಿಶೇಷ ಪಾತ್ರದಲ್ಲಿ ನಟಿಸಿರುವುದು ವಿಶೇಷ ಮತ್ತು ಕೌತುಕ ಸುದ್ದಿ!
ಇನ್ನೊಂದು ಪೂಜಾ ಗಾಂಧಿ ಅಭಿನಯದ'ಆಪ್ತ'. ಇದು ರ್ಯಾಗಿಂಗ್ ಪಿಡುಗನ್ನು ಬಗ್ಗುಬಡೆಯುವ ಕತೆ. ನಾಯಕಿ ಪ್ರಧಾನ ಚಿತ್ರವೂ ಹೌದು. ಕೊನೆಯಲ್ಲಿ ಒಂದು ಸಂದೇಶವಿರುತ್ತದೆ ಎನ್ನುತ್ತಾರೆ ನಿರ್ದೇಶಕ ಸಂಜೀವ್ ಕುಮಾರ್. ಮತ್ತೊಂದು ಚಿತ್ರ 'ಟೇಕ್ ಇಟ್ ಈಸಿ'. ಹೆಸರು ಕೇಳಿ, ಇದು ಇಂಗ್ಲೀಷ್ ಚಿತ್ರ ಇರಬೇಕು ಎಂದು ಮೂತಿ ಮುರಿಯಬೇಡಿ. ಇದು ಪಕ್ಕಾ ಕನ್ನಡ ಚಿತ್ರ! ಒಂದೇ ಮನೆಯಲ್ಲಿ ನಡೆಯುವ ಕತೆಯನ್ನು ಕಷ್ಟಪಟ್ಟು ಕ್ಯಾಮೆರಾದಲ್ಲಿ ಸೇರೆಹಿಡಿದಿದ್ದಾರೆ ಅನಂತ ಪದ್ಮನಾಭ. ಈ ನಿರ್ದೇಶಕರು ಹಿಂದೆ ನಿಷೇಧಾಜ್ಞೆ ಎಂಬ ಘನ ಘೋರ ಸಿನಿಮಾ ಮಾಡಿದ್ದರು!
ಮಗದೊಂದು ಚಿತ್ರ ಸೀತಾರಾಮ್ ಕಾರಂತ್ ನಿರ್ದೇಶನದ 'ನಾವು ನಮ್ಮ ಹೆಂಡತಿಯರು'. ಕಾಸರವಳ್ಳಿಯವರ ಶಿಷ್ಯ, ಕಲಾಕಾರ್, ಗನ್ ಚಿತ್ರಗಳ ಹೀರೋ ಹರೀಶ್ ರಾಜ್ ಈ ಚಿತ್ರದ ನಾಯಕ. ವಾರಸ್ದಾರ ಅಶ್ವಿನಿ, ನೇತ್ರಾ ಶೆಟ್ಟಿ ಮೊದಲಾದ ತಾರಾಗಣವಿದೆ.
ಈ ಎಲ್ಲ ಚಿತ್ರಗಳಿಗೂ ಕಾಂಪಿಟೇಷನ್ ಕೊಡಲು ಬರುತ್ತಿದೆ 'ವೀರಬಾಹು' ಎಂಬ ಮತ್ತೊಂದು ದೊಡ್ಡ ಬಜೆಟ್ ಚಿತ್ರ. ದುನಿಯಾ ವಿಜಯ್ ಪ್ಲಸ್ ಎಸ್.ಮಹೇಂದರ್ ಸಂಗಮ ಇಲ್ಲಾಗಿದೆ. ನಿಧಿಸುಬ್ಬಯ್ಯ ಮೊದಲ ಬಾರಿಗೆ ವಿಜಿ ಜೊತೆ ಹೆಜ್ಜೆ ಹಾಕಿದ್ದಾರೆ!ಹಾಗಾದರೆ ಈ ಐದೂ ಚಿತ್ರಗಳನ್ನು ನೋಡಲು ಪ್ರೇಕ್ಷಕ ಪ್ರಭು ಎಷ್ಟರಮಟ್ಟಿಗೆ ಹರಸಾಹಸ ಪಡಬಹುದು? ಕಲ್ಪಿಸಿಕೊಳ್ಳುವುದು ನಿಮಗೆ ಬಿಟ್ಟ ಕೆಲಸ.


Click it and Unblock the Notifications











