ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಆತ್ಮಹತ್ಯೆ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಭಿಮಾನ್ ಸ್ಟುಡಿಯೋದಲ್ಲಿ ನಡೆದಿದೆ. ಡಾ.ವಿಷ್ಣು ಸಮಾಧಿ ಪಕ್ಕದಲ್ಲೇ ಇರುವ ಅಭಿಮಾನ್ ಸ್ಟುಡಿಯೋದ ಕೋಣೆಯೊಂದರಲ್ಲಿ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿರುವ ಅಭಿಮಾನಿಯ ಹೆಸರು ಡಾನ್ಸರ್ ಚಂದ್ರು (26). ಕೆಲ ದಿನಗಳ ಹಿಂದೆಯೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೊರಕಿದೆ. ನಟ ದಿವಂಗತ ಬಾಲಕೃಷ್ಣ ಅವರ ಕುಂಟುಂಬಿಕರು ಸ್ಟುಡಿಯೋ ಪಕ್ಕದ ಸಮಾಧಿ ಬಳಿಗೆ ಹೋದಾಗ ಶವದ ಕೊಳೆತ ವಾಸನೆ ಬಂದಿದೆ. ಇದೇನು ಎಂದು ಪರಿಶೀಲಿಸಿದಾಗ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ಕೂಡಲೆ ಬಾಲಕೃಷ್ಣ ಕುಂಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಾ.ವಿಷ್ಣು ನಿಧನರಾದಾಗಿನಿಂದಲೂ ಡಾನ್ಸರ್ ಚಂದ್ರು ಅವರ ಸಮಾಧಿ ಬಳಿಗೆ ಬಂದು ಹೋಗುತ್ತಿದ್ದ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಆದರೆ ಈತನ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಈತ ಅಭಿಮಾನಿ ಸ್ಟುಡಿಯೋದ ಮೇಕಪ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಸಾವಿಗೆ ಕಾರಣ ಏನು? ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications











