‘ಸಿಲ್ಲಿ ಲಲ್ಲಿ’ ಕಾಂಪೌಂಡರ್ ಈಗ ಕೆಎಎಸ್ ಆಫೀಸರ್!
ಬೆಂಗಳೂರು : ಈ ಟೀವಿಯ ಜನಪ್ರಿಯ ಧಾರಾವಾಹಿ ಸಿಲ್ಲಿಲಲ್ಲಿಯಲ್ಲಿ , ಕೌಂಪೌಂಡರ್ ಗೋವಿಂದನಾಗಿ ಖ್ಯಾತವಾಗಿರುವ ಸಂಗಮೇಶ ಉಪಾಸೆ ಕೆಎಎಸ್ ಮೊದಲ ಶ್ರೇಣಿ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
1998ರಲ್ಲಿ ನಡೆಸಿದ ಕೆಎಎಸ್ ಪರೀಕ್ಷೆ ಫಲಿತಾಂಶದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಮಂಗಳವಾರವಷ್ಟೆ ಪ್ರಕಟಿಸಿದೆ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಾಂದಿಗೆ ಆಯ್ಕೆಯಾಗಿರುವ ಉಪಾಸೆ, ಅಸಿಸ್ಟಂಟ್ ಕಂಟ್ರೋಲರ್ ಹುದ್ದೆ ತನ್ನದಾಗಿಸಿಕೊಂಡಿದ್ದಾರೆ.
ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು, ಆಕಾಶವಾಣಿ ಬಿ ಗ್ರೇಡ್ ಕಲಾವಿದ. ನಾಟಕ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಪತ್ರಿಕೆಯಾಂದರ ಉಪಸಂಪಾದಕರಾಗಿದ್ದ ಅವರು ಪ್ರಕಾಶನ ಕ್ಷೇತ್ರದಲ್ಲೂ ಕೆಲಸಮಾಡಿದ್ದಾರೆ.
ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿರುವ ಸಂಗಮೇಶ್, ಪ್ರವೃತ್ತಿಯಿಂದ ಕಲಾವಿದ. ಈ ಟೀವಿಯಲ್ಲಿ ಪ್ರಸಾರವಾಗುವ ಸಿಲ್ಲಿಲಲ್ಲಿಯ ಕಾಂಪೌಂಡರ್ ಗೋವಿಂದನ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ಆಡಳಿತ ಕ್ಷೇತ್ರಕ್ಕೆ ಅಡಿ ಇಡುತ್ತಿರುವ ಅವರು, ಯಶಸ್ವೀ ಆಡಳಿತಗಾರ ಎನಿಸಿಕೊಳ್ಳಲಿ ಎಂದು ದಟ್ಸ್ಕನ್ನಡ ಹಾರೈಸುತ್ತದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ :
'ನನ್ನ ಹೆಸರು ಉಪಾಸೆ ಕಣ್ರೀ...ಗೋವಿಂದ ಅಲ್ರೀ..."


Click it and Unblock the Notifications











