ಪ್ರೇಮ್ 'ಚಂದ್ರಮ' ತಬ್ಬಿಕೊಂಡ ರಘು, ರೇಖಾ
'ಪ್ರೇಮ ಚಂದ್ರಮ' ಚಿತ್ರದಿಂದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಾಯಕಿ ನಿಖಿತಾ ಇಬ್ಬರೂ ಹೊರಬಿದ್ದಿದ್ದಾರೆ. ಕಾರಣ ಏನು ಎಂದು ಕೇಳಿದರೆ ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ಹೇಳಿದ್ದಾರೆ. ಚಿತ್ರ ನಾಯಕ ನಟ ಪ್ರೇಮ್ ಒಂದು ಹೇಳಿದರೆ ಚಿತ್ರದ ನಿರ್ದೇಶಕರು ಮತ್ತೊಂದು ಹೇಳುತ್ತಿದ್ದಾರೆ. ನಿಖಿತಾ ಮತ್ತೊಂದು ಕಾರಣ ಹೇಳಿ ಕಾಲು ಕಿತ್ತಿದ್ದಾರೆ.
ಚಿತ್ರದ ನಾಯಕಿ ನಿಖಿತಾ ಮಾತ್ರ ನನಗೆ 'ಪ್ರಿನ್ಸ್' ಚಿತ್ರದಲ್ಲಿ ಅವಕಾಶ ಸಿಕ್ಕಿದೆ ಎಂದು ಕಾರಣ ಹೇಳಿ ಹೊರಬಂದಿದ್ದಾರೆ.ಆದರೆ ನಿಖಿತಾಗೂ ಪ್ರೇಮ್ ಗೂ ನಡುವಿನ ಮನಸ್ತಾಪವೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದೆ. ಪ್ರೇಮ್ ತಮಗೆ ಬೇಕಾದ ನಟಿಯನ್ನೇ ನಾಯಕಿಯನ್ನಾಗಿ ಮಾಡುವಂತೆ ಹಟ ಹಿಡಿದಿದ್ದರು ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ.
ಪ್ರೇಮ್ ಎಲ್ಲ ವಿಷಗಳಲ್ಲೂ ಮೂಗು ತೂರಿಸುತ್ತಿದ್ದರು. ನಿಖಿತಾ ಜೊತೆ ನಟಿಸುವುದಿಲ್ಲ ಎಂದು ಹೇಳಿದ್ದಕ್ಕೆ ಆಕೆ ಹೊರನಡೆದರು. ಬಳಿಕ ರೇಖಾ ನಾಯಕಿಯಾಗಬಹುದೇ ಎಂದು ಕೇಳಿದರೆ ಅದಕ್ಕೂ ಅವರು ಆಗೊಲ್ಲ ಎಂದರು. ತಮಗೆ ಬೇಕಾದವರನ್ನೇ ನಾಯಕಿಯನ್ನಾಗಿ ಮಾಡಿ ಎಂದಿದ್ದರು ಎನ್ನುತ್ತಾರೆ ಶಿಂಧೆ.
ಆದರೆ ಪ್ರೇಮ್ ಹೇಳುವ ಕತೆಯೇ ಬೇರೆ. ಚಿತ್ರದ ಮುಹೂರ್ತದ ಆಹ್ವಾನ ಪತ್ರಿಕೆಯ ಡಿಸೈನ್ ಮಾಡಿಸುವ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರಂತೆ. ವಿನ್ಯಾಸವನ್ನು ತಾನೇ ಖುದ್ದು ಮಾಡಿಸಿದ್ದರಂತೆ. ನಿರ್ಮಾಪಕರು ಹೇಳದೆ ಕೇಳದೆ ಆಹ್ವಾನ ಪತ್ರಿಕೆಯ ವಿನ್ಯಾಸನ್ನು ಬದಲಿಸಿದ್ದಾರೆ. ಇದನ್ನು ಪ್ರಶ್ನಿಸಿದ ನನಗೆ ನಿಖರವಾದ ಉತ್ತರ ಸಿಗಲಿಲ್ಲ. ಹಾಗಾಗಿ ಚಿತ್ರದಿಂದ ಹೊರಬಂದಿದ್ದೇನೆ ಎಂದಿದ್ದಾರೆ.
ಇಷ್ಟೆಲ್ಲಾ ರಾದ್ಧಾಂತಗಳಿಂದ ಆಗಿದ ಪ್ರಯೋಜನ ಏನೆಂದರೆ ಚಿತ್ರಕ್ಕೆ ನಾಯಕ ನಟನಾಗಿ ರಘು ಮುಖರ್ಜಿ ಆಯ್ಕೆಯಾಗಿದ್ದಾರೆ. ಜೂನ್ 18ರಂದು ಚಿತ್ರ ಸೆಟ್ಟೇರಲಿದೆ. ಚಿತ್ರಕ್ಕೆ ನಾಯಕಿಯಾಗಿ ರೇಖಾ ಆಯ್ಕೆ ಖಚಿತವಾಗಿದೆ. ಚಿತ್ರದ ಪ್ರಧಾನ ನಾಯಕ ನಟ ಕಿರಣ್. ಸಾಲದ್ದಕ್ಕೆ ಲವ್ಲಿಸ್ಟಾರ್ ಪ್ರೇಮ್ ವಿರುದ್ಧ 'ಪ್ರೇಮ ಚಂದ್ರಮ' ಚಿತ್ರದ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದಾರೆ.


Click it and Unblock the Notifications











