ವೇದಾಂತ ಅಧ್ಯಯನಕ್ಕೆ ನಾನಾ ಪಾಟೇಕರ್ ಒಲವು
ಕಾರ್ಕಳ : ಗುರುಕುಲದಲ್ಲಿ ವೇದ್ಯಾಂತ ಅಧ್ಯಯನ ಮಾಡುವ ಕುರಿತು ಬಾಲಿವುಡ್ನ ಜನಪ್ರಿಯ ನಟ ನಾನಾ ಪಾಟೇಕರ್ ಒಲವು ವ್ಯಕ್ತಪಡಿಸಿದ್ದಾರೆ.
ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ (ಜ.16) ನಡೆದ ಶ್ರೀ ಮಧ್ವ ಗುರುಕುಲ ಉದ್ಘಾಟನೆ ಹಾಗೂ ರಾಜ ಗೋಪುರ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ನಾನಾ ಪಾಟೇಕರ್ ವೇದಾಂತಾಧ್ಯಯನದ ಬಯಕೆ ವ್ಯಕ್ತಪಡಿಸಿದರು.
ದುಡ್ಡನ್ನು ಹೇಗೆ ಬೇಕಾದರೂ ಸಂಪಾದಿಸಬಹುದು. ಆದರೆ ಹಣದ ಸದ್ವಿನಿಯೋಗಕ್ಕೆ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಗುರುಕುಲದಲ್ಲಿ ಸ್ವಲ್ಪ ಕಾಲ ವೇದಾಂತ ಕಲಿಯಲು ಅವಕಾಶ ಮಾಡಿಕೊಟ್ಟಲ್ಲಿ ನಾನು ಕೃತಜ್ಞನಾಗಿರುತ್ತೇನೆ ಎಂದು ನಾನಾ ಪಾಟೇಕರ್ ಹೇಳಿದರು.
ಭೌತಿಕ ಉನ್ನತಿಗೆ ವಿಜ್ಞಾನ- ತತ್ವಜ್ಞಾನ
ಭೌತಿಕ ಉನ್ನತಿಗೆ ವಿಜ್ಞಾನ ಅತ್ಯವಶ್ಯಕ. ಅದೇರೀತಿ ಆಧ್ಯಾತ್ಮಿಕ ತಿಳಿವಳಿಕೆಗೆ ತತ್ವಜ್ಞಾನ ಅಗತ್ಯ. ವಿಜ್ಞಾನ ಹಾಗೂ ತತ್ವಜ್ಞಾನ ಶರೀರ ಮತ್ತು ಆತ್ಮವಿದ್ದಂತೆ ಎಂದು ಶ್ರೀ ಮಧ್ವ ಗುರುಕುಲ ಉದ್ಘಾಟನೆ ಮಾಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಮಧ್ವ ಗುರುಕುಲ ಹಾಗೂ ರಾಜ ಗೋಪುರ ನಿರ್ಮಿಸಿದ ಮುಂಬೈ ಉದ್ಯಮಿ ರಾಘು ಶೆಟ್ಟಿ , ನಳಿನಿ ಶೆಟ್ಟಿ ದಂಪತಿಯನ್ನು ಪೇಜಾವರ ಶ್ರೀ ಸನ್ಮಾನಿಸಿದರು.(ಇನ್ಫೋ ವಾರ್ತೆ)


Click it and Unblock the Notifications










