ಚಿತ್ರನಟ ಆನಂದ್ ಗೆ ಷರತ್ತುಬದ್ಧ ಜಾಮೀನು
ವರದಕ್ಷಿಣಿ ಕಿರುಕುಳ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಕನ್ನಡ ಚಿತ್ರ ನಟ ಆನಂದ್ ಗೆ ಮಂಗಳವಾರ ಷರತ್ತುಬದ್ಧ ಜಾಮೀನು ಲಭಿಸಿದೆ. ಬಸವನಗುಡಿ ಮಹಿಳಾ ಪೊಲೀಸರು ಆನಂದ್ ನನ್ನು ಶುಕ್ರವಾರ (ಮೇ.14) ರಾತ್ರಿ ಬಂಧಿಸಿದ್ದರು. ವರದಕ್ಷಿಣೆ ಕಿರುಕುಳ ಹಾಗೂ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆನಂದ್ ಪತ್ನಿ ಭರಣಿ ದೂರು ನೀಡಿದ್ದರು.
ಈ ಕುರಿತು ಆನಂದ್ ಜಾಮೀನಿಗಾಗಿ ಬೆಂಗಳೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 2ನೇ ಎಸಿಎಂಎಂ ನ್ಯಾಯಾಲಯ 25 ಸಾವಿರ ರುಪಾಯಿ ಭದ್ರತಾ ಠೇವಣಿ ಪಡೆದು ಆನಂದ್ ಗೆ ಷರತ್ತುಬದ್ಧ ಜಾಮೀನು ನೀಡಿದೆ. ಹದಿನೈದು ದಿನಗಳಿಗೊಮ್ಮೆ ಬಸವನಗುಡಿ ಮಹಿಳಾ ಠಾಣೆಗೆ ಹಾಜರಾಗಿ ಸಹಿ ಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಮೇ.14ರಂದು ಬಂಧನಕ್ಕೆ ಒಳಗಾಗಿದ್ದ ಆನಂದ್ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದರು. ಆನಂದ್ ಇದುವರೆಗೂ 'ಮನಸುಗಳ ಮಾತು ಮಧುರ' ಹಾಗೂ 'ನನ್ನೆದೆಯ ಹಾಡು' ಎಂಬ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಳ್ಳಿತೆರೆಗೆ ಅಡಿಯಿಡುವ ಮುನ್ನ ಕಿರುತೆರೆಯಲ್ಲಿ ನಿರೂಪಕನಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು.


Click it and Unblock the Notifications











