ಸದ್ದಿಲ್ಲದಂತೆ ಸುದೀಪ್ ಜೊತೆ ದ್ವಾರಕೀಶ್ ಚಿತ್ರ
ತಾನು ಯಾರ ಮುಂದೆಯೂ ನಿಂತು ಕಾಲ್ ಶೀಟ್ ಬೇಡುವುದಿಲ್ಲ ಎಂದು ಗುಡುಗಿದ್ದ ಕರ್ನಾಟಕದ ಮಹಾ ಕುಳ್ಳ ದ್ವಾರಕೀಶ್ ಇದೀಗ ಸದ್ದಿಲ್ಲದಂತೆ ಕಿಚ್ಚ ಸುದೀಪ್ ಜೊತೆ ಚಿತ್ರವೊಂದರ ಸಿದ್ಧತೆಯಲ್ಲಿದ್ದಾರೆ! ನಲವತ್ತು ಚಿತ್ರಗಳನ್ನು ನಿರ್ಮಿಸಿದ್ದೇನೆ. ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಕಾಲ್ ಶೀಟ್ ಗಾಗಿ ಕಂಡಕಂಡ ಹೀರೋಗಳ ಮನೆ ಮುಂದೆ ನಾನು ನಿಲ್ಲಬೇಕಾ? ನೆವರ್... ಅಸಾಧ್ಯ... ಎಂದಿದ್ದರು.
ಸಾಹಸಿಂಹ ವಿಷ್ಣುವರ್ಧನ್ ಅಭಿನಯದ 'ಆಪ್ತಮಿತ್ರ' ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ನಿಮ್ಮ ಮುಂದಿನ ಚಿತ್ರ ಯಾವುದು? ಯಾವಾಗ? ಎಂದು ಕೇಳಿದ ಪತ್ರಕರ್ತರಿಗೆ ದ್ವಾರಕೀಶ್ ಹೀಗೆ ತಿರುಗೇಟು ನೀಡಿದ್ದರು. ನಾನು ಮಾತ್ರ ಹೀರೋಗಳ ಮನೆಗೆ ಹೋಗುವುದಿಲ್ಲ. ಯಾರಾದರು ನನ್ನ ಬಂದರೆ ಚಿತ್ರ ನಿರ್ಮಿಸುವುದಾಗಿ ಹೇಳಿದ್ದರು.
ಸ್ವತಃ ದ್ವಾರಕೀಶ್ ಅವರೇ ಸುದೀಪ್ ಅವರನ್ನು ಸಂಪರ್ಕಿಸದರೋ ಅಥವಾ ಸುದೀಪ್ ಅವರೇ ಇವರ ಬಳಿ ಬಂದರೋ ಗೊತ್ತಿಲ್ಲ. ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಸುದೀಪ್ ಕಾಲ್ ಶೀಟ್ ಕೊಟ್ಟಿದ್ದಾರೆ. ಚಿತ್ರ ಹೆಸರು, ತಾರಾಗಣ, ತಾಂತ್ರಿಕ ಬಳಗ ಇನ್ನೂ ಅಂತಿಮವಾಗಿಲ್ಲ.
ಅಂದಹಾಗೆ ಇದು ರೀಮೇಕ್ ಚಿತ್ರವೋ ಸ್ವಮೇಕ್ ಚಿತ್ರವೋ ಎಂಬುದು ನಿಗೂಢವಾಗಿದೆ. ತಮಿಳಿನ ಕುಮಾರ್ ಎಂಬಾತ ಆಕ್ಷನ್, ಕಟ್ ಹೇಳಲಿದ್ದಾರೆ. ತಮಿಳಿನ ರವಿಕುಮಾರ್ ಗರಡಿಯಲ್ಲಿ ಕುಮಾರ್ ಪಳಗಿರುವ ಕಾರಣ ಚಿತ್ರ ಸ್ವಮೇಕ್ ಆಗಲಿದೆ ಎಂಬ ಸಣ್ಣ ಸುಳಿವು ಗಾಂಧಿನಗರದಲ್ಲಿ ಸುಳಿದಾಡಿದೆ. ಒಟ್ಟಿನಲ್ಲಿ ದ್ವಾರಕೀಶ್ ಹೊಸ ಕುಳ್ಳ ಹಳೆ ಕಳ್ಳನ ಸ್ಟೈಲ್ ನಲ್ಲಿ ಬರುತ್ತಿದ್ದಾರೆ.


Click it and Unblock the Notifications











