'ತಳಿರು ತೋರಣ'ಕ್ಕೆ ಖ್ಯಾತ ಛಾಯಾಗ್ರಾಹಕ ನಿಯಮ್
ಸುಧೀರ್ ಅತ್ತಾವರ್ ನಿರ್ದೇಶಿಸುತ್ತಿರುವ 'ತಳಿರು ತೋರಣ' ಚಿತ್ರಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ನಿಯಮ್ ಘೋಷ್ ಛಾಯಾಗ್ರಾಹಣ ಮಾಡಲಿದ್ದಾರೆ. ಸತ್ಯಜಿತ್ ರೇ ಅವರ ಬಹುತೇಕ ಚಿತ್ರಗಳಿಗೆ ಘೋಷ್ ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದರು.
ಭಾರತ ಚಲನಚಿತ್ರಜಗತ್ತು ಕಂಡ ಅಪ್ರತಿಮ ನಿರ್ದೇಶಕ ಸತ್ಯಜಿತ್ ರೇ ಅವರೊಂದಿಗೆ 25 ವರ್ಷಗಳ ಕಾಲ ದುಡಿದ ಅನುಭವಿ ಛಾಯಾಗ್ರಾಹಕ ಘೋಷ್. ಸತ್ಯಜಿತ್ ರೇ ನಿಧನರಾದ ಬಳಿಕ ಘೋಷ್ ಹತ್ತು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.
ಎಂ ಎಸ್ ಸತ್ಯು ಅವರ 'ಕಹಾಂ ಕಹಾಂಸೆ ಗುಜರ್ ಗಯೇ' ಚಿತ್ರದ ಮೂಲಕ ಘೋಷ್ ಮತ್ತೆ ಚಿತ್ರರಂಗಕ್ಕೆ ಅಡಿಯಿಟ್ಟಿದ್ದರು. 'ಇಜ್ಜೋಡು" ಚಿತ್ರಕ್ಕೂ ಘೋಷ್ ಕೆಲಸ ಮಾಡಿದ್ದಾರೆ. ಇಜ್ಜೋಡಿನಲ್ಲಿ ಸುಧೀರ್ ಅತ್ತಾವರ್ ಸಹ ಕೆಲಸ ಮಾಡಿದ್ದರು ಎಂಬುದು ವಿಶೇಷ.
ಸುನಿಲ್ ಅತ್ತಾವರ್ ಅವರ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಘೋಷ್, ಮುಂದೊಂದು ದಿನ ಅವರ ಚಿತ್ರದಲ್ಲಿ ಕೆಲಸ ಮಾಡುವ ಭರವಸೆಯನ್ನು ನೀಡಿದ್ದರಂತೆ. ಇದೀಗ 'ತಳಿರು ತೋರಣ' ದ ಮೂಲಕ ನಿಯಮ್ ಘೋಷ್, ಅತ್ತಾವರ ಅವರ ಆಸೆಯನ್ನು ಈಡೇರಿಸಿದ್ದಾರೆ. 'ತಳಿರು ತೋರಣ' ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ.


Click it and Unblock the Notifications











