ಸಬ್ಸಿಡಿ ಚಿತ್ರಗಳ ಆಯ್ಕೆಪಟ್ಟಿಗೆ ಬ್ರೇಕ್ ಹಾಕಿದ ಸಿಎಂ
2009-10ನೇ ಸಾಲಿನ ಸಬ್ಸಿಡಿ ಚಿತ್ರಗಳ ಆಯ್ಕೆಯಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಆಯ್ಕೆ ಪಟ್ಟಿಯನ್ನು ತಡೆಹಿಡಿದಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಬ್ಸಿಡಿ ಚಿತ್ರಗಳ ಆಯ್ಕೆಯಲ್ಲಿ ನಡೆದಿರುವ ಅವ್ಯಾವಹಾರದ ಬಗ್ಗೆ ತಿಳಿಸಿದ್ದರು.
ಬಜೆಟ್ ಮಂಡನೆ ಹಾಗೂ ರಾಜ್ಯ ರಾಜಕೀಯದಲ್ಲಿ ಎದ್ದಿರುವ ಬಿರುಗಾಳಿಯನ್ನೂ ಲೆಕ್ಕಿಸದ ಮುಖ್ಯಮಂತ್ರಿಗಳು, ನಿರ್ಮಾಪಕರ ಸಮಸ್ಯೆಗಳನ್ನು ಸಾವಧಾನದಿಂದ ಕೇಳಿ ಕೋಲ್ಗೆಟ್ ನಗೆ ಬೀರಿ ಸಬ್ಸಿಡಿ ಆಯ್ಕೆ ಪಟ್ಟಿಯನ್ನು ತಡೆಹಿಡಿಯುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮಾ.16ರಂದು ಸುವರ್ಣ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಸಬ್ಸಿಡಿ ಚಿತ್ರಗಳ ಆಯ್ಕೆಯಲ್ಲಿ ನಡೆದಿರುವ ಗೋಲ್ಮಾಲ್ ಬಯಾಲಾಗಿತ್ತು. ನಿರ್ದೇಶಕ ಕೂಡ್ಲು ರಾಮಕೃಷ್ಣ ಬಳಿ ಸಬ್ಸಿಡಿ ಸಮಿತಿ ಆಯ್ಕೆ ಸಮಿತಿ ಸದಸ್ಯ ಸುರೇಶ್ ಮಂಗಳೂರು ಲಂಚ ಪಡೆದಿದ್ದದ್ದು ಬಹಿರಂಗವಾಗಿತ್ತು.
ಈ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ಮಾಪಕರಾದ ಮುನಿರತ್ನ, ರಾಮು, ಸೂರಪ್ಪ ಬಾಬು, ಉಮೇಶ್ ಬಣಕಾರ್, ಎನ್ಎಂ ಸುರೇಶ್, ಕೆಎಂ ವೀರೇಶ್, ಡಿಕೆ ರಾಮಕೃಷ್ಣ, ಪರಮೇಶ್, ಪ್ರೇಮ್, ಮಹೇಶ್ ಸುಖಧರೆ, ರಮೇಶ್ ಕಶ್ಯಪ್, ನರಸಿಂಹರಾಜು ಸೇರಿದಂತೆ ಹಲವರು ಸಿಎಂರನ್ನು ಭೇಟಿ ಮಾಡಿ ಸಬ್ಸಿಡಿ ಹಗರಣದ ಡಿವಿಡಿಯನ್ನು ಹಸ್ತಾಂತರಿಸಿದ್ದರು. (ಏಜೆನ್ಸೀಸ್)


Click it and Unblock the Notifications











