twitter
    For Quick Alerts
    ALLOW NOTIFICATIONS  
    For Daily Alerts

    ಕೆಳದಿ ಶಿವಪ್ಪ ನಾಯಕನಾಗಿ ಕುಮಾರ ಬಂಗಾರಪ್ಪ

    By Rajendra
    |

    ಸುದೀರ್ಘ ಸಮಯದ ಬಳಿಕ ನಟ, ನಿರ್ಮಾಪಕ ಕುಮಾರ ಬಂಗಾರಪ್ಪ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ. ಉಪೇಂದ್ರ ಜೊತೆ 'ರಕ್ತ ಕಣ್ಣೀರು' ಚಿತ್ರದ ಬಳಿಕ ಅವರು ಬಹುತೇಕ ರಾಜಕೀಯದಲ್ಲೆ ಕಳೆದುಹೋದರು. ಅದೇ ಉತ್ಸಾಹ, ಅದೇ ಲವವವಿಕೆಯಿಂದ ಇದೀಗ ಮತ್ತೆ ಬೆಳ್ಳಿತೆರೆಗೆ ಮರಳಲಿದ್ದಾರೆ 'ಕೆಳದಿ ಶಿವಪ್ಪ ನಾಯಕ'ನಾಗಿ.

    ಕುಮಾರ ಬಂಗಾರಪ್ಪ ಅವರ ನಾಯಕತ್ವದಲ್ಲಿ ಮೂಡಿಬರಲಿರುವ ಮಹತ್ವಾಕಾಂಕ್ಷಿ ಚಿತ್ರ'ಕೆಳದಿ ಶಿವಪ್ಪ ನಾಯಕ'. ಇದೊಂದು ಐತಿಹಾಸಿಕ ಚಿತ್ರವಾಗಿರುವ ಕಾರಣ ಚಿತ್ರಕತೆ, ಲೋಕೇಶನ್, ತಾಂತ್ರಿಕತೆಯಲ್ಲಿ ಕುಮಾರ ಬಂಗಾರಪ್ಪ ಹೆಚ್ಚು ಕಾಳಜಿ ವಹಿಸಲಿದ್ದಾರೆ. ಈ ಚಿತ್ರ ಅವರ ರೇಣುಕಾಂಬ ಲಾಂಛನದಲ್ಲಿ ನಿರ್ಮಾಣವಾಗಲಿದೆ.

    ಟಿ ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಎಂ ಎಂ ಕೀರವಾಣಿ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರಲಿದೆ. ಚಿತ್ರದ ತಾರಾಗಣದ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಚಿತ್ರಕತೆ ಬಗ್ಗೆ ನಾಗಾಭರಣ ಅವರು ಹೆಚ್ಚು ಶ್ರಮ ವಹಿಸಿದ್ದಾರೆ. ಎರಡು ವರ್ಷಗಳಿಂದ ಚಿತ್ರಕತೆ ಬಗ್ಗೆ ಸಾಕಷ್ಟು ವರ್ಕ್ ಮಾಡಿದ್ದು ಹದಿನಾರನೆ ಶತಮಾನದ ಐತಿಹಾಸಿಕ ವೈಭವವನ್ನು ತೆರೆಗೆ ತರಲಿದ್ದಾರೆ.

    ಶಿವಪ್ಪ ನಾಯಕ ಪಾತ್ರಕ್ಕಾಗಿ ಕುಮಾರ ಬಂಗಾರಪ್ಪ ತಮ್ಮ ತಲೆಗೂದಲನ್ನು ಉದ್ದಕ್ಕೆ ಬೆಳೆಸಿದ್ದಾರೆ. ಮೂವರು ನಾಯಕಿಯರ ಚಿತ್ರ ಇದಾಗಿದ್ದು ಅವರು ಯಾರು ಎಂಬುದನ್ನು ಗುಟ್ಟಾಗಿಡಲಾಗಿದೆ! ಐತಿಹಾಸಿಕ ಚಿತ್ರ ಎಂದ ಮೇಲೆ ಬಜೆಟ್ ಗಾತ್ರವೂ ಹೆಚ್ಚಾಗಲಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಅತಿ ಹೆಚ್ಚು ಬಜೆಟ್ ನ ಚಿತ್ರ ಇದಾಗಲಿದೆ ಎನ್ನುತ್ತಾರೆ ಕುಮಾರ ಬಂಗಾರಪ್ಪ.

    ಮಲೆನಾಡಿನ ಬಹುತೇಕ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ಆಗಸ್ಟ್ ಅಂತ್ಯಕ್ಕೆ ಚಿತ್ರ ಸೆಟ್ಟೇರಲಿದ್ದು ಕೆಳದಿ ಶಿವಪ್ಪ ನಾಯಕ ಆಳಿದ ಜಾಗಗಳಲ್ಲೂ ಚಿತ್ರೀಕರಣ ನಡೆಯಲಿದೆ. ಚಿತ್ರ ನೈಜವಾಗಿ ಮೂಡಿಬರಲಿ ಎಂಬ ಉದ್ದೇಶದಿಂದ ನೈಜ ಮಳೆಯಲ್ಲೇ ಚಿತ್ರೀಕರಿಸಲಾಗುತ್ತದೆ. ಬಹಳಷ್ಟು ತಂತ್ರಜ್ಞರು ಈಗಾಗಲೆ ಕಾರ್ಯೋನ್ಮುಖರಾಗಿದ್ದಾರೆ.

    Wednesday, July 21, 2010, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X