ಚಿತ್ರೀಕರಣದ ವೇಳೆ ನಟಿ ರಮ್ಯಾ ಅಪಾಯದಿಂದ ಪಾರು

ಇದೆಲ್ಲ ನಡೆದದ್ದು ನಗರದ ಅರಮನೆ ಮೈದಾನದಲ್ಲಿ. ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ. ಕ್ರೇನ್ ಸಹಾಯದಿಂದ ರಮ್ಯಾಳನ್ನು ಮೇಲಕ್ಕೆತ್ತಲು ಥ್ರಿಲ್ಲರ್ ಮಂಜು ರಿಮೋಟ್ ನಲ್ಲಿ ಬಟನ್ ಒತ್ತಿದರು. ಆದರೆ ಅದು ತಪ್ಪು ಬಟನ್ ಆಗಿತ್ತು. ಅಷ್ಟೇ.. ಹತ್ತು ಅಡಿ ಎತ್ತರಕ್ಕೆ ಏರಬೇಕಾಗಿದ್ದ ಕ್ರೇನ್ , ಇಪ್ಪತ್ತು ಅಡಿ ಎತ್ತರಕ್ಕೆ ಒಮ್ಮೆಲೆ ಮೇಲೆರಿದ್ದರಿಂದ ಅಲ್ಲಿದ್ದವರಲ್ಲಿ ಗಾಬರಿ ಮೂಡಿತು.
ಈ ಹಠಾತ್ ಪರಿಣಾಮದಿಂದ ಬೆಚ್ಚಿದ ರಮ್ಯಾ ಕಿಟಾರನೆ ಕಿರುಚಿಕೊಂಡರು. ತುಸು ಹೆಚ್ಚು ಕಡಿಮೆಯಾಗಿದ್ದರೂ, ಗಾಬರಿಯಿಂದ ಅವರು ಕೆಳಕ್ಕೆ ಬೀಳುವ ಸಂಭವವಿತ್ತು ಎನ್ನುತ್ತದೆ ಚಿತ್ರತಂಡ. ಆ ಕೂಡಲೆ ಇನ್ನೊಬ್ಬರು ರಿಮೋಟನ್ನು ಬಳಸಿ ರಮ್ಯಾಳನ್ನು ಕ್ರೇನ್ನಿಂದ ಕೆಳಗಿಳಿಸಿದರು. ಈ ಘಟನೆಯಿಂದ ಚಿತ್ರೀಕರಣ ತಂಡದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಘಟನೆಯಿಂದ ಚೇತರಿಸಿಕೊಳ್ಳಲು ರಮ್ಯಾಳಿಗೆ ಎರಡು ತಾಸು ಬೇಕಾಯಿತು. ಅಲ್ಲಿಯವರೆಗೂ ಚಿತ್ರೀಕರಣ ಬಂದ್ ಆಗಿತ್ತು. ಮತ್ತೆ ರಮ್ಯಾ ಎದ್ದು ರೆಡಿ ಎಂದಾಗಲೇ ಚಿತ್ರೀಕರಣ ಶುರುವಾಗಿದ್ದು. ಈ ಚಿತ್ರದ ನಾಯಕ ಉಪೇಂದ್ರ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರದ ನಿರ್ದೇಶಕರು.


Click it and Unblock the Notifications











