ಅಪಾರ ನಿರೀಕ್ಷೆಯ ಪರಿಗೆ ಕೈಕೊಟ್ಟ ಅಮೀರ್ ಖಾನ್
ಮಿ. ಪರಫೆಕ್ಟ್ ಖ್ಯಾತಿಯ ಬಾಲಿವುಡ್ ನಟ ಅಮೀರ್ ಖಾನ್ ಪರಿಪರಿಯಾಗಿ ಬೇಡಿಕೊಂಡಿದ್ದರೂ ಕನ್ನಡ ಚಿತ್ರ 'ಪರಿ' ಪ್ರೀಮಿಯರ್ ಶೋಗೆ ಬರಲೇ ಇಲ್ಲ. ಮುಂಬೈನಲ್ಲಿ ತಮ್ಮ ಕನ್ನಡದ ಚಿತ್ರ ಪರಿಯ ಪ್ರೀಮಿಯರ್ ಶೋ ಇಟ್ಟುಕೊಂಡು ಅಮೀರ್ ಖಾನ್ ಅವರನ್ನು ಆಮಂತ್ರಸಿದ್ದರು ನಿರ್ದೇಶಕ ಸುದೀರ್ ಅತ್ತಾವರ್.
ಆದರೆ ಏನು ಕಾರಣವೋ, ಅಮೀರ್ ಬರಲೇ ಇಲ್ಲ. ಅತ್ತಾವರ್ ಅದಕ್ಕೆ ಅಳಲಿಲ್ಲವಾದರೂ ಅಮೀರ್ ಬರುತ್ತಾರೆಂದು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆ ಸಳ್ಳಾದರೂ ಬಾಲಿವುಡ್ ನ ಸಾಕಷ್ಟು ಘಟಾನುಘಟಿಗಳು ಬಂದು ಚಿತ್ರ ನೋಡಿ ಮೆಚ್ಚುಗೆ ಸೂಚಿಸಿ ಚಿತ್ರತಂಡದ ಉತ್ಸಾಹಕ್ಕೆ ಹಾಗೂ ಸಂತೋಷಕ್ಕೆ ಕಾರಣರಾದರು.
ಬಾಲಿವುಡ್ಡಿನ ರಾಜೇಶ್ವರಿ ಸಚಿದೇವ್, ವರುಣ್ ವಡೋಲ, ಅನುರಾಧ ಪಟೇಲ್, ಉದಿತ್ ನಾರಾಯಣ್, ಸಾಧನಾ ಸರ್ಗಮ್, ಜಾವೆದ್ ಜಾಫ್ರಿ, ಅಂಜನ್ ಶ್ರೀವಾಸ್ತವ್, ಅಖಿಲೇಂದ್ರ ಮಿಶ್ರಾ, ಸುಲಬ್ ಆರ್ಯ, ರಮೇಶ್ ತಲ್ವಾರ್, ಬಾಬ್ ಬ್ರಹ್ಮ ಭಟ್, ಚಂದನ್ ರಾಯ್, ರೇಣುಕಾ ಸಹಾನೆ ಸೇರಿ ಸುಮಾರು ಮುನ್ನೂರು ಮಂದಿ ಪರಿ ಚಿತ್ರದ ಪೂರ್ವಭಾವಿ ವೀಕ್ಷಣೆ ಮಾಡಿದ್ದಾರೆ.
ಪರಿ ಚಿತ್ರ ಇದೇ 27 ರಂದು ಕರ್ನಾಟಕ ಹಾಗೂ ಮುಂಬೈನಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ಮೊದಲು ಸಾಕಷ್ಟು ಸದ್ದು-ಸುದ್ದಿ ಮಾಡಿರುವ ಇದು, ಬಿಡಗಡೆ ನಂತರ ದಾಖಲೆ ಬರೆಯುವದೋ ಅಥವಾ ಸೈಡ್ ಗೆ ಸರಿಯುವದೋ! ಆದರೆ 'ಈ 'ಪರಿ'ಯ ಸೊಬಗಾವ ಚಿತ್ರದಲೂ ನಾ ಕಾಣೆ' ಎಂದು ಅಮೀರ್ ಖಾನ್ ಹೇಳುತ್ತಾರೆಂದು ನಿರೀಕ್ಷಿಸಿದ್ದ ಚಿತ್ರತಂಡಕ್ಕೆ ನಿರಾಸೆ ಆಗಿರುವುದು ಸುಳ್ಳಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











