ತೆಲುಗು ಸಿನಿಮಾ ತಾರೆಗಳ ನಿವಾಸದ ಮೇಲೆ ಐಟಿ ದಾಳಿ
ತೆಲುಗು ಸಿನಿಮಾ ತಾರೆಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಬುಧವಾರ(ಮಾ.23) ಆದಾಯ ತೆರಿಗೆ ದಾಳಿ ನಡೆದಿದೆ. ಟಾಲಿವುಡ್ ಸಿನಿಮಾ ತಾರೆಗಳಾದ ನಾಗಾರ್ಜುನ, ರವಿತೇಜ ಹಾಗೂ ತೆಲುಗಿನಲ್ಲಿ ಮಿಂಚುತ್ತಿರುವ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದಿರುವ ದಾಳಿಯಲ್ಲಿ ಐಟಿ ಅಧಿಕಾಗಳು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆಯಿಂದ ಮುಂದುವರಿದಿರುವ ದಾಖಲೆ ಪತ್ರಗಳ ಹುಡುಕಾಟ ಇನ್ನೂ ಮುಂದುವರಿದಿದೆ. ಅಕ್ಕಿನೇನಿ ವೆಂಕಟೇಶ್ (ನಾಗಾರ್ಜುನ ಸಹೋದರ), ಅನ್ನಪೂರ್ಣ ಸ್ಟುಡಿಯೋ ಹಾಗೂ ನಾಗಾರ್ಜುನ ಅವರ ನಿಕಟವರ್ತಿ ಡಿ ಶಿವ ಪ್ರಸಾದ್ ರೆಡ್ಡಿ ಅವರ ನಿವಾಸಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿರುವುದು ವಿಶೇಷ.
ಹೈದಾರಾಬಾದಿನ ಜರ್ನಲಿಸ್ಟ್ಸ್ ಕಾಲೋನಿಯಲ್ಲಿ ಇತ್ತೀಚೆಗೆ ಅನುಷ್ಕಾ ಶೆಟ್ಟಿ ಮನೆಯೊಂದನ್ನು ಖರೀದಿಸಿದ್ದರು. ಆ ಮನೆ ಸೇರಿದಂತೆ ಬೆಂಗಳೂರು ಇಂದಿರಾನಗರದ ಮನೆ ಮೇಲೂ ಐಟಿ ದಾಳಿ ನಡೆದಿದೆ. ವಿಶಾಖಪಟ್ಟಣಂನಲ್ಲಿ ಅನುಷ್ಕಾ ಭೂಮಿ ಖರೀದಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ಹಣಕಾಸು ವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಈ ಎಲ್ಲಾ ಸಿನಿಮಾ ತಾರೆಗಳ ಬ್ಯಾಂಕ್ ಖಾತೆಗಳಿಂದ ಭಾರಿ ಪ್ರಮಾಣದ ಹಣಕಾಸು ವರ್ಗಾವಣೆಯಾಗಿರುವುದು ಐಟಿ ದಾಳಿಯಲ್ಲಿ ಖಚಿತವಾಗಿದೆ. ತೆಲುಗು ಸಿನಿಮಾ ತಾರೆಗಳ ಬಳಿ ಇನ್ನೂ ಏನೇನು ದಾಖಲೆ, ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಐಟಿ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಕಾಗದ ಪತ್ರಗಳ ಪರಿಶೀಲನೆ ಮುಂದುವರಿಯುತ್ತಿದೆ.


Click it and Unblock the Notifications











