ಬಾಲಿವುಡ್ ಚಿತ್ರ ನಿರ್ದೇಶನಕ್ಕೆ ಅರ್ಜುನ್ ಸರ್ಜಾ

''ಕತೆ, ಚಿತ್ರಕತೆಯನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದೇನೆ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯನ್ನು ಅಂತಿಮಗೊಳಿಸಬೇಕಾಗಿದೆ. ಚಿತ್ರಕತೆಯನ್ನು ಕೈಗೆತ್ತಿಕೊಂಡಾಗ ಇದನ್ನು ಹಿಂದಿಯಲ್ಲಿ ಮಾಡಿದರೇನೆ ಉತ್ತಮ ಅನ್ನಿಸಿತು ಹಾಗಾಗಿ ಈ ಚಿತ್ರವನ್ನು ಹಿಂದಿಯಲ್ಲಿ ಮಾಡುತ್ತಿರುವುದಾಗಿ ಅರ್ಜುನ್ ತಿಳಿಸಿದ್ದಾರೆ.
ಸಾಹಸ ಪಾತ್ರಗಳಿಗೆ ಹೆಸರಾದವರು ಅರ್ಜುನ್ ಸರ್ಜಾ. ದಕ್ಷಿಣದ ಭಾರತದಲ್ಲಿ ಪ್ರಮುಖ ನಿರ್ಮಾಪಕರಾಗಿಯೂ ಹೆಸರು ಮಾಡಿದವರು. ಪ್ರಸ್ತುತ ಅರ್ಜುನ್ ಸರ್ಜಾ ಕನ್ನಡದಲ್ಲಿ 'ವಾಯುಪುತ್ರ'ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅವರ ಸಹೋದರ ಕಿಶೋರ್ ಸರ್ಜಾ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರಧಾನ ಪಾತ್ರಗಳಲ್ಲಿ ಅಂದ್ರಿತಾ ರೇ, ಅರ್ಜುನ್ ಸರ್ಜಾ ಸೋದರಳಿಯ ಚಿರಂಜೀವಿ ಮತ್ತು ಅಂಬರೀಶ್ ಕಾಣಿಸಲಿದ್ದಾರೆ. ಚಿತ್ರ ನಿರ್ಮಾಣ ನಂತರದ ಚಟುವಟಿಕೆಗಳಲ್ಲಿದೆ.
''ವಾಯುಪುತ್ರ ಚಿತ್ರವನ್ನು ಜೂನ್ ತಿಂಗಳ ಕೊನೆಯಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ತೆರೆಗೆ ತರಲು ಯೋಚಿಸುತ್ತಿದ್ದೇವೆ. ರಾಮು ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ನಾನು ನಟಿಸಲಿದ್ದೇನೆ. ರಾಮು ಅವರ ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ '' ಎಂದು ಅರ್ಜುನ್ ಸರ್ಜಾ ಹೇಳಿದರು. ಬೆಂಗಳೂರು ಮೂಲದ ಅರ್ಜುನ್ ಸರ್ಜಾ ಬಾಲ ಕಲಾವಿದನಾಗಿ 'ಸಿಂಹದ ಮರಿ ಸೈನ್ಯ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಕನ್ನಡ, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ಅರ್ಜುನ್ ಇದುವರೆಗೂ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











