ಕನ್ನಡ ಚಲನಚಿತ್ರರಂಗ : ಯಜಮಾನನಿಲ್ಲದ ಮನೆ

ಯಜಮಾನ ಇಲ್ಲದ ಮನೆಯಂತಾಗಿರುವ, ನಿರ್ದಿಷ್ಟ ಗುರಿಯಿಲ್ಲದೆ ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ ಎಂದರೆ ಬಹುಷಃ ಯಾರಿಂದಲೂ ಕರಾರುವಕ್ಕಾದ ಉತ್ತರ ಸಿಗಲಾರದು. ಎರಡೋ ಮೂರೋ ಹಿಟ್ ಚಿತ್ರ ನೀಡಿ ಚಿತ್ರರಂಗ ಗಮನ ಸೆಳೆಯುತ್ತಿದೆ ಅನ್ನುವಷ್ಟರಲ್ಲೇ 'ಗೋಕರ್ಣಕ್ಕೆ ಹೋದ್ರೂ ಶನೀಶ್ವರ ಬಿಡ' ಎನ್ನುವ ಹಾಗೆ ಏನಾದರೋ ಒಂದು ಘಟನೆಗಳು ಕಪ್ಪುಚುಕ್ಕೆಯಂತಾಗಿ ಚಿತ್ರರಂಗ ಹಿನ್ನಡೆ ಅನುಭವಿಸುತ್ತಲೇ ಇದೆ.
ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಗೆ ಕಾರಣ ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಯಾಕೆಂದರೆ ನಮ್ಮವರಿಂದಲೇ ಈ ಪರಿಸ್ಥಿತಿ ಹೊರತು ಮೂರನೆಯವರಿಂದಲ್ಲ. ಗೊತ್ತು ಗುರಿಯಿಲ್ಲದೆ ಸೆಟ್ಟೇರುತ್ತಿರುವ ಚಿತ್ರಗಳ ನಡುವೆ ಚಿತ್ರರಂಗಕ್ಕೆ ಪೆಡಂಭೂತವಾಗಿ ಬೆಳೆದಿರುವ ಥಿಯೇಟರ್ ಸಮಸ್ಯೆ.
ಡಾ. ರಾಜ್ ಜೀವಿತಾವಧಿಯಲ್ಲಿ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಎಂದಿಗೂ ಚಿತ್ರಮಂದಿರಗಳ ಅಭಾವ ಕಂಡು ಬಂದಿರಲಿಲ್ಲ. ಅದು ಆಗಿನ ಕಾಲದ ಸಿನಿಮಾದ ಗುಣಮಟ್ಟವಿರಬಹುದು ಅಥವಾ ಡಾ.ರಾಜ್ ಅನ್ನುವ ಕ್ಯಾಪ್ಟನ್ ಮೂಲಕ ಚಿತ್ರರಂಗ ಒಗ್ಗಟ್ಟು ಪ್ರದರ್ಶಿರಬಹುದು.
ನಟಿ ರಮ್ಯಾ ನಿರ್ಮಾಪಕ ಗಣೇಶ್ ನಡುವಣ ಸಂಭಾವನೆ ವಿಚಾರದಲ್ಲಿ ಶುರುವಾದ ಗಲಾಟೆ ಚಿತ್ರರಂಗ ಇಬ್ಬಾಗದ ಹಂತಕ್ಕೆ ಬಂದಿದ್ದು, ದರ್ಶನ ಮತ್ತು ನಿಖಿತಾ ಪ್ರಕರಣ ಇರಬಹುದು, ವಿಷ್ಣುವರ್ಧನ ಟೈಟಲ್ ವಿಚಾರವಿರಬಹುದು ಅಥವಾ ಲೇಟೆಸ್ಟ್ ಮುನಿರತ್ನಂ ಮತ್ತು ಕೆ ಮಂಜು ಬಿಡುಗಡೆ ವಿವಾದ ಇರಬಹುದು, ಒಟ್ಟಿನಲ್ಲಿ ನಮ್ಮ ಚಿತ್ರರಂಗ ನಗೆಪಟಾಲಿಗೆ ಗುರಿಯಾಗುತ್ತಿದೆ, ಗುರಿಯಾಗುತ್ತಲೇ ಇದೆ.
1970ರಲ್ಲಿ ಚಿತ್ರರಂಗ ನಿಷೇದಿಸಿದ್ದ ಡಬ್ಬಿಂಗ್ ವಿವಾದ, ಅಣ್ಣಾವ್ರು ಇದ್ದಷ್ಟು ದಿನ ಸುದ್ದಿಯಾಗಿರಲಿಲ್ಲ. ಈಗ ಮತ್ತೆ ಡಬ್ಬಿಂಗ್ ವಿವಾದ ಎದ್ದಿದೆ, ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೇ ಬೇಡವೇ ಎನ್ನುವ ಚರ್ಚೆ ಈ ಲೇಖನದಲ್ಲಿ ಅಪ್ರಸ್ತುತ.
ಡಾ. ರಾಜ್ ಅವರ ಸರಳ ಜೀವನಶೈಲಿ, ಕಲೆಗೆ ಮತ್ತು ಕಲಾವಿದರಿಗೆ ಕೊಡುತ್ತಿದ್ದ ಗೌರವ, ಮೃದುಸ್ವಭಾವದ ನಡೆನುಡಿ ಇತರರಿಗೆ ಮಾದರಿಯಾಗುವಂತದ್ದು. ಒಡೆದು ಹೋದ ಮನೆಯಂತಾಗಿರುವ ಕನ್ನಡ ಚಿತ್ರಂಗಕ್ಕೆ, ಸೋತು ಹೈರಾಣವಾಗಿರುವ ನಮ್ಮ ಚಿತ್ರರಂಗಕ್ಕೆ ಅಣ್ಣಾವ್ರ ಹುಟ್ಟಿದ ಹಬ್ಬದ ದಿನದಂದು ನಮ್ಮ ಒಕ್ಕೂರಿಲಿನ ಕೋರಿಕೆ "ಡಾ. ರಾಜ್ ಮತ್ತೆ ಹುಟ್ಟಿಬನ್ನಿ'.


Click it and Unblock the Notifications











