ಸಿನಿಮೀಯ ರೀತಿಯಲಿ ಲಹರಿ ವೇಲು ಅಪಹರಣ

ಬುಧವಾರ ಸಂಜೆ ಅಂಬೇಡ್ಕರ್ ಭವನದಲ್ಲಿ ಈ ಟಿವಿ ಆಯೋಜಿಸಿದ್ದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವೇಲು ಭಾಗವಹಿಸಿದ್ದರು. ತುರ್ತು ಕೆಲಸದ ನಿಮಿತ್ತ ಅರ್ಧದಲ್ಲಿ ಸಮಾರಂಭದಿಂದ ಎದ್ದು ಹೊರಬಂದಿದ್ದಾರೆ. ಅವರು ಹೊರಬಂದ ಕೂಡಲೆ ಅಲ್ಲೇ ಇದ್ದ ಐದು ಮಂದಿಯ ತಂಡ ವೇಲು ಅವರ ಮೊಬೈಲ್ ಫೋನ್ ಕಿತ್ತುಕೊಂಡು ಅವರನ್ನು ಕಾರಿನಲ್ಲಿ ಅಪಹರಿಸಿದೆ.
ಸ್ವಲ್ಪ ಸಮಯದ ಬಳಿಕ ಎಸಿಪಿ ಅಶೋಕ್ ಅವರಿಂದ ವೇಲು ಅವರಿಗೆ ಕರೆ ಬಂದಿದೆ. ಕೂಡಲೆ ಜಾಗೃತರಾದ ಅಪಹರಣಕಾರರು ವೇಲು ಅವರನ್ನು ಇಂಡಿಯನ್ ಎಕ್ಸ್ ಪ್ರೆಸ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಅವರನ್ನು ತಾವೆಲ್ಲಾ ಯಾರು ಎಂದು ವೇಲು ಪ್ರಶ್ನಿಸಿದಾಗ, "ಕಮ್ಮನಹಳ್ಳಿ ಬಿಜೆಪಿ ಕಾರ್ಪೊರೇಟರ್ ಗೋವಿಂದರಾಜು ಅವರ ತಮ್ಮ ಶ್ರೀನಿವಾಸರಾಜು ಕಡೆಯವರು" ಎಂದು ಹೇಳಿದ್ದಾಗಿ ವೇಲು ಅವರು ದಟ್ಸ್ಕನ್ನಡಕ್ಕೆ ತಿಳಿಸಿದರು.
ಈ ಟಿವಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಆಗಮಿಸಿದ್ದರು. ಬುಧವಾರ (ಮಾ.23) ಸಂಜೆ 7.30ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಲಹರಿ ವೇಲು ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಾವ ಕಾರಣಕ್ಕೆ ಲಹರಿ ವೇಲು ಅವರನ್ನು ಅಪಹರಿಸಲಾಗಿತ್ತು ಎಂಬುದು ಇನ್ನೂ ಖಚಿತವಾಗಿಲ್ಲ.


Click it and Unblock the Notifications











