ಕನ್ನಡ ಚಿತ್ರೋದ್ಯಮಕ್ಕೆ ಮಮತಾ ಹೊಸ ಝಲಕ್
ರೈಲ್ವೆ ಬಜೆಟ್ 2010ರಲ್ಲಿ ಕುಮಾರಿ ಮಮತಾ ಬ್ಯಾನರ್ಜಿ ಕನ್ನಡ ಚಿತ್ರೋದ್ಯಮಕ್ಕೆ ಅನಿರೀಕ್ಷಿತ ವರಗಳನ್ನು ನೀಡಿದ್ದಾರೆ. ಮಮತಾ ರೈಲು ಬೆಳ್ಳಿಪರದೆ ಹೊಸ ಝಲಕ್ ನೀಡಿದ್ದನ್ನು ಕಂಡು ಕನ್ನಡ ಚಿತ್ರ ನಿರ್ಮಾಪಕರು ಪುಳಕಗೊಂಡಿದ್ದಾರೆ. ಈ ಬಾರಿಯ ರೈಲ್ವೆ ಬಜೆಟನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಸಿನಿಮಾ ಚಟುವಟಿಕೆಗಳಿಗಾಗಿ ಸೆಕಂಡ್ ಕ್ಲಾಸ್ ಸ್ಲೀಪರ್ ನಲ್ಲಿ ಪ್ರಯಾಣಿಸುವ ಸಿನಿಮಾ ತಂತ್ರಜ್ಞರಿಗೆ ಶೇ.75ರಷ್ಟು ಹಾಗೂ ಫಸ್ಟ್ ಕ್ಲಾಸ್ ದರ್ಜೆಯಲ್ಲಿ ಪ್ರಯಾಣಿಸುವವರಿಗೆ ಶೇ.50ರಷ್ಟು ರಿಯಾಯಿತಿ ಮಮತಾ ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಕನ್ನಡ ಚಿತ್ರ ನಿರ್ಮಾಪಕರ ಸಂಘದ (ಕೆಎಫ್ ಪಿಎ) ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಮಾತನಾಡುತ್ತಾ, ಚಿತ್ರೋದ್ಯಮಕ್ಕಾಗಿ ರೈಲ್ವೆ ಬಜೆಟ್ ನಲ್ಲಿ ನಾವು ಏನನ್ನೂ ನಿರೀಕ್ಷಿಸಿರಲಿಲ್ಲ. ಮಮತಾ ಅವರ ನಿರ್ಣಯಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ಮಮತಾ ಅವರಿಗೆ ಕೃತಜ್ಞತೆಗಳು ಎಂದು ಪ್ರತಿಕ್ರಿಯಿಸಿದರು.
ಹೊರ ರಾಜ್ಯಗಳಲ್ಲಿ ಚಿತ್ರೀಕರಿಸುವ ಕನ್ನಡ ಚಿತ್ರಗಳಿಗೆ ಇದರಿಂದ ಲಾಭವಾಗಲಿದೆ.ಬಹುತೇಕ ಬಂಗಾಳಿ ಚಿತ್ರಗಳು ಮುಂಬೈನಲ್ಲಿ ಚಿತ್ರೀಕರಣಗೊಳ್ಳುತ್ತವೆ. ಈ ಹೊರೆಯನ್ನುತಗ್ಗಿಸಲು ಮಮತಾ ಈ ಹೊಸ ರಿಯಾಯಿತಿಗಳನ್ನು ಘೋಷಿಸಿರಬೇಕು ಎಂಬುದು ತಜ್ಞರ ಅಭಿಮತ.
ಇದರಿಂದ ತಂತ್ರಜ್ಞರಿಗಿಂತಲೂ ಹೆಚ್ಚಾಗಿ ಲಾಭವಾಗುವುದು ನಿರ್ಮಾಪಕರಿಗೆ. ಒಟ್ಟಾರೆಯಾಗಿ ಚಿತ್ರೋದ್ಯಮಕ್ಕೆ ಲಾಭವಾಗಲಿದೆ. ನಿರ್ಮಾಪಕರ ಅನಾವಶ್ಯಕ ಖರ್ಚುಗಳು ಕಡಿಮೆಯಾಗಲಿವೆ. ಮಮತಾ ಅವರ ಈ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿರುವುದಾಗಿ ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಸಂಘದ ಕಾರ್ಯದರ್ಶಿ ರವೀಂದ್ರನಾಥ್ ತಿಳಿಸಿದರು.


Click it and Unblock the Notifications











