ನಿರ್ಮಾಪಕರ ಸಂಘಕ್ಕೆ ಜೋಸೈಮನ್ ರಾಜೀನಾಮೆ
ಚಲನಚಿತ್ರ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಜೋಸೈಮನ್ ಗುರುವಾರ ರಾಜೀನಾಮೆ ಪತ್ರವನ್ನು ಒಗೆದಿದ್ದಾರೆ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜೋಸೈಮನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಚೇರಿಯಲ್ಲಿ ಕೆಲಸ ಮಾಡುವ ಭಾಸ್ಕರ್ ಎಂಬುವವರ ಹೆಸರಿನಲ್ಲಿ ಹಣವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಖಜಾಂಚಿ ಕನ್ನಡ ಸೋಮು ಕೊಟ್ಟ ಚೆಕ್ ದುರ್ಬಳಕೆ ಮಾಡಿಕೊಂಡ ಆರೋಪವೂ ಜೋಸೈಮನ್ ಮೇಲಿದೆ. ಕನ್ನಡ ಚಿತ್ರನಟಿ ಭವ್ಯಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಖ್ಯಾತಿ ಜೋಸೈಮನ್ ಅವರದು.
ಘಟನೆಯ ವಿವರ: ಅನಾರೋಗ್ಯದಿಂದ ಬಳಲುತ್ತಿದ್ದ ಆಫೀಸ್ ಬಾಯ್ ಭಾಸ್ಕರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ.ಅವನ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಂಘ ತೀರ್ಮಾನಿಸಿ ರು.10 ಸಾವಿರ ಕೊಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ನಿರ್ಮಾಪಕ ಸಂಘದ ಅಧ್ಯಕ್ಷ ಕೆ ಸಿ ಎನ್ ಚಂದ್ರಶೇಖರ್ ಚಿತ್ರೀಕರಣ ನಿಮಿತ್ತ ವಿದೇಶದಲ್ಲಿದ್ದರು.
ಖಜಾಂಚಿ ಕನ್ನಡ ಸೋಮು ಬಳಿ ಫೋನ್ ಬಿಲ್ ಕಟ್ಟುವ ಸಲುವಾಗಿ ಜೋಸೈಮನ್ ಚೆಕ್ ಕೇಳಿದ್ದಾರೆ. ಬಿಎಸ್ಸ್ಸೆನ್ನೆಲ್ ಹೆಸರಿನಲ್ಲಿ ನೀಡಿದ್ದ್ದ ಚೆಕ್ ತಿದ್ದುಪಡಿ ಮಾಡಿ ಅದರ ಪಕ್ಕ ಭಾಸ್ಕರ ಹೆಸರನ್ನು ಸೇರಿಸಿ ರು.85 ಸಾವಿರಗಳನ್ನು ಜೋಸೈಮನ್ ಡ್ರಾ ಮಾಡಿದ್ದಾರೆ. ರು.50 ಸಾವಿರ ತಮ್ಮ ಬಳಿ ಇಟ್ಟುಕೊಂಡು ಉಳಿದ ರು.35 ಸಾವಿರಗಳನ್ನು ಭಾಸ್ಕರ್ ಗೆ ನೀಡಿದ್ದಾರೆ ಎನ್ನಲಾಗಿದೆ.
"ನನ್ನಿಂದ ತಪ್ಪಾಗಿದೆ. ಹಣ ದುರ್ಬಳಕೆ ಮಾಡಿದ್ದು ಸರಿಯಲ್ಲ. ನಿರ್ಮಾಪಕರ ಸಂಘಕ್ಕೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಜೋಸೈಮನ್ ಹೇಳಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications











