ಆಕ್ಷನ್, ಕಟ್ ಹೇಳಲಿದ್ದಾರೆ ನವರಸ ನಾಯಕ ಜಗ್ಗೇಶ್!
ನವರಸ ನಾಯಕ ಜಗ್ಗೇಶ್ ಚಿತ್ತ ಈಗ ನಿರ್ದೇಶನದತ್ತ ಹೊರಳಿದೆ. ಆಕ್ಷನ್, ಕಟ್ ಹೇಳುವ ಸೂಚನೆಯನ್ನು ಸ್ವತಃ ಜಗ್ಗೇಶ್ ಅವರೇ ಕೊಟ್ಟಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟು ಇಪ್ಪತ್ತೈದು ವರ್ಷಗಳೇ ಸರಿದು ಹೋಗಿವೆ. ಗಾಂಧಿನಗರದ ಎಲ್ಲ ತಂತ್ರ, ಕುತಂತ್ರಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ನಿರ್ದೇಶನಕ್ಕೆ ಇದೇ ಸಕಾಲ ಎಂದು ಜಗ್ಗೇಶ್ ಅವರಿಗೆ ಅನ್ನಿಸಿದೆ.
''ತಾವು ನಿರ್ದೇಶಿಸುವ ಚಿತ್ರ ಗಾಂಧಿನಗರದ ಸಿದ್ಧ ಸೂತ್ರಗಳಿಂದ ಹೊರತಾಗಿರಬೇಕು ''ಎನ್ನುವ ಜಗ್ಗೇಶ್, ಆ ಚಿತ್ರದಲ್ಲಿ ತಾವೇ ನಟಿಸುವ ಸೂಚನೆಯನ್ನು ಕೊಟ್ಟಿದ್ದಾರೆ. ಸದ್ಯಕ್ಕೆ ಚಿತ್ರ ನಿರ್ದೇಶನದ ಪೂರ್ವ ತಯಾರಿಯಲ್ಲಿ ಜಗ್ಗೇಶ್ ಮಗ್ನರಾಗಿದ್ದಾರೆ. ಈ ಬಗ್ಗೆ ಅವರ ಮಗ ಗುರುರಾಜ್ ಜತೆ ಸಹ ಆಗಾಗ ಚರ್ಚಿಸುವುದುಂಟಂತೆ.
ಒಂದು ಕಡೆ ರಾಜಕೀಯ ಮತ್ತೊಂದೆಡೆ ಬಣ್ಣದ ಬದುಕು. ಈ ಎರಡು ಕ್ಷೇತ್ರಗಳಲ್ಲಿ ಬಿಜಿಯಾಗಿರುವ ಜಗ್ಗೇಶ್ ವರ್ಷಕ್ಕೊಂದು ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ಏತನ್ಮಧ್ಯೆ ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಅವರ ಖುಷಿಯನ್ನು ಇಮ್ಮಡಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











